ಬಿಜೆಪಿ ಮುಖಂಡರ ಹೆಸರಲ್ಲಿ ವಂಚನೆ ಆರೋಪ: ಬಂಧಿತ ಯುವರಾಜ್ ವಿರುದ್ಧ ಮತ್ತೊಂದು ಎಫ್ಐಆರ್
ಬೆಂಗಳೂರು, ಡಿ.22: ಬಿಜೆಪಿ ಮುಖಂಡರ ಹೆಸರಲ್ಲಿ ವಂಚನೆ ಮಾಡುತ್ತಿದ್ದ ಆರೋಪದಡಿ ಬಂಧನಕ್ಕೊಳಗಾಗಿರುವ ಯುವರಾಜ್ ಯಾನೆ ಸ್ವಾಮೀಜಿ ವಿರುದ್ಧ ಮತ್ತೊಂದು ಎಫ್ಐಆರ್ ದಾಖಲಾಗಿದೆ.
ಬಂಧಿತ ಆರೋಪಿ ಯುವರಾಜ್ ಹುದ್ದೆಗಳ ಆಮಿಷ ಮಾತ್ರವಲ್ಲದೆ, ಕಡಿಮೆ ಬೆಲೆಗೆ ಜಾಗ ಕೊಡಿಸುವುದಾಗಿಯೂ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.
ಮೈಸೂರು ಮೂಲದ ಡಾ.ಗುರುರಾಜ್ ರವಿ ಎಂಬವರಿಗೆ ದೇವನಹಳ್ಳಿ ಬಳಿ ವಿವಾದಿತ ಭೂಮಿ ಇದ್ದು, ವಿವಾದ ಬಗೆಹರಿಸಿ ಕೊಡಿಸುವುದಾಗಿ ನಂಬಿಸಿ ಹಣ ವಸೂಲಿ ಮಾಡಿದ್ದ ಎನ್ನಲಾಗಿದೆ.
ಮೊದಲಿಗೆ ಆರೋಪಿಯು, ಗುರುರಾಜ್ ರವಿ ಬಳಿ ಜಮೀನಿನ ಮಾಲಕರಿದ್ದಾರೆಂದು ತೋರಿಸಲು ಖಾಲಿ ಚೆಕ್ ಕೊಡಿ ಎಂದು ಕೇಳಿದ್ದಾನೆ. ಈ ವೇಳೆ 85 ಕೋಟಿ ರೂಪಾಯಿ ಬ್ಯಾಂಕ್ ಚೆಕ್ಗಳನ್ನು ನೀಡಿದ್ದಾರೆ. ತದನಂತರ, ಆರೋಪಿ 6.5 ಕೋಟಿ ರೂಪಾಯಿ ಹಣ ಹಾಗೂ 85 ಕೋಟಿ ರೂ. ಚೆಕ್ ಪಡೆದು ಮೊಬೈಲ್ ಸಂಪರ್ಕ ಕಡಿತಗೊಳಿಸಿದ್ದಾನೆ. ಈ ಬಗ್ಗೆ ಪ್ರಶ್ನಿಸಿದಾಗ ಆರೋಪಿಯು ಜೀವ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಸಂಬಂಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.