ಮತ್ತೆ ಸಚಿವರ ಖಾತೆ ಬದಲಾವಣೆ?
ಬೆಂಗಳೂರು, ಜ.25: ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಬಳಿಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರಿಗೆ ತಲೆನೋವಾಗಿ ಪರಿಣಮಿಸಿರುವ ಖಾತೆ ಹಂಚಿಕೆ ಗೊಂದಲ ಮುಂದುವರಿದಿದ್ದು, ಭಿನ್ನರ ಅಸಮಾಧಾನ ಶಮನಕ್ಕಾಗಿ ಮೂವರು ಸಚಿವರ ಖಾತೆಯನ್ನು ಮತ್ತೊಮ್ಮೆ ಬದಲು ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಸಚಿವ ಡಾ.ಕೆ.ಸುಧಾಕರ್ ಅವರಿಂದ ಹಿಂಪಡೆದಿದ್ದ ವೈದ್ಯಕೀಯ ಶಿಕ್ಷಣ ಖಾತೆಯನ್ನು ಸುಧಾಕರ್ ಅವರಿಗೆ ಪುನಃ ನೀಡಲಾಗಿದೆ. ಸಚಿವ ಆನಂದ್ ಸಿಂಗ್ ಅವರಿಗೆ ಮುಖ್ಯಮಂತ್ರಿಯ ಬಳಿಯಲ್ಲಿದ್ದ ಮೂಲ ಸೌಕರ್ಯ ಖಾತೆ ಜತೆಗೆ ಹಜ್ ಮತ್ತು ವಕ್ಫ್ ಖಾತೆಯ ಹೆಚ್ಚುವರಿ ಹೊಣೆ ವಹಿಸಲಾಗಿದೆ. ಹಿರಿಯ ಸಚಿವ ಜೆ.ಸಿ.ಮಾಧುಸ್ವಾಮಿ ಅವರಿಗೆ ನೀಡಿದ್ದ ವೈದ್ಯಕೀಯ ಶಿಕ್ಷಣ ಖಾತೆಯನ್ನು ಹಿಂಪಡೆದು ಅವರಿಗೆ ಪರಿಸರ ಖಾತೆ ಮತ್ತು ಪ್ರವಾಸೋದ್ಯಮ ಇಲಾಖೆ ಖಾತೆ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಅಧಿಕೃತ ಆದೇಶ ಇನ್ನಷ್ಟೇ ಬರಬೇಕಿದೆ.
ಸಚಿವ ಸಂಪುಟ ವಿಸ್ತರಣೆಯ ಬಳಿಕ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಖಾತೆ ಹಂಚಿಕೆಯೂ ತೀವ್ರ ತಲೆನೋವಾಗಿತ್ತು. ಹಿರಿಯ ಸಚಿವ ಜೆ.ಸಿ.ಮಾಧುಸ್ವಾಮಿ 'ತನಗೆ ವೈದ್ಯಕೀಯ ಶಿಕ್ಷಣ ಖಾತೆಯನ್ನು ನೀಡಿದ್ದಾರೆ. ಅದರಲ್ಲಿ ನಾನು ಹೇಗೆ ಮಾಡಲಿ' ಎಂದು ಬಹಿರಂಗವಾಗಿಯೇ ಅಸಮಾಧಾನವನ್ನು ಹೊರಹಾಕಿದ್ದರು.