'ಹಿಂದಿ ಭಾಷೆಯ ತಿರಸ್ಕಾರವೇಕೆʼ ಹೇಳಿಕೆ : ಕ್ಷಮೆಯಾಚಿಸಿದ ಸಾಹಿತಿ ದೊಡ್ಡರಂಗೇಗೌಡ
ಬೆಂಗಳೂರು : ‘ಹಿಂದಿ ಭಾಷೆಯ ತಿರಸ್ಕಾರ ಏಕೆ, ಹಿಂದಿ ನಮ್ಮ ರಾಷ್ಟ್ರ ಭಾಷೆ' ಎಂದು ದೊಡ್ಡರಂಗೇಗೌಡ ಅವರು ಪತ್ರಿಕೆಯೊಂದರ ಸಂದರ್ಶನದಲ್ಲಿ ನೀಡಿದ ಹೇಳಿಕೆಗೆ ಸಾಹಿತಿಗಳು, ಕನ್ನಡಪರ ಕಾರ್ಯಕರ್ತರು ಹಾಗೂ ನೆಟ್ಟಿಗರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ಈ ಬಗ್ಗೆ ಸಾಹಿತಿ ದೊಡ್ಡರಂಗೇಗೌಡ ಅವರು ಕ್ಷಮೆಯಾಚಿಸಿದ್ದಾರೆ.
ಕ್ಷಮೆ ಯಾಚನೆ...
''ನಾನೇನು ಯಾವುದೇ ಭಾಷೆಯನ್ನು ನನ್ನ ತಲೆಯ ಮೇಲೆ ಹೊತ್ತು ಮೆರೆಸುತ್ತಿಲ್ಲ. ನಾನು ಭಕ್ತಿ ಪೂರ್ವಕವಾಗಿ ನನ್ನ ಅಂತರಾಳದಿಂದ ಕನ್ನಡವನ್ನು ಆರಾಧಿಸುತ್ತೇನೆ. ಕನ್ನಡವನ್ನೇ ನನ್ನ ತಲೆಯ ಮೇಲೆ ಹೊತ್ತು ಮೆರೆಸುತ್ತೇನೆ. ಕನ್ನಡಿಗರ ಮೇಲೆ ಹಿಂದಿ ಭಾಷೆಯ ಹಾಗು ಇಂಗ್ಲಿಷ್ ಹೇರಿಕೆಯ ರೀತಿ ನೀತಿಯನ್ನು ನಾನು ಸಹಿಸುವುದಿಲ್ಲ. ನನ್ನ ಮಾತುಗಳು ಕನ್ನಡ ಜನರ ಮನಸ್ಸನ್ನು ನೋಯಿಸಿದ್ದರೆ, ನಾನು ಕ್ಷಮೆ ಯಾಚಿಸುತ್ತೇನೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.''
ಖಾಸಗಿ ವೆಬ್ಸೈಟ್ ಸಂದರ್ಶನದಲ್ಲಿ ತಮ್ಮ ಹೇಳಿಕೆ ಕುರಿತು ಸ್ಪಷ್ಟನೆ ನೀಡಿದ್ದ ದೊಡ್ಡರಂಗೇಗೌಡ, ‘ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಕನ್ನಡ ನಾಡಿನಲ್ಲಿ ಕನ್ನಡವೇ ಸಾರ್ವಭೌಮ, ಕನ್ನಡಕ್ಕೆ ಆದ್ಯತೆ, ಕನ್ನಡ ಭಾಷೆಗೆ ಮೊದಲ ಮಣೆ. ನಮ್ಮ ಕನ್ನಡ ಭಾಷೆಯೇ ರಾಷ್ಟ್ರ ಭಾಷೆ' ಎಂದು ಹೇಳಿದ್ದರು.