ಭೀತಿ ಹುಟ್ಟಿಸಿದ್ದ ಚಿರತೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿ
ಬೆಂಗಳೂರು, ಫೆ.1: ಬೇಗೂರು ರಸ್ತೆಯಲ್ಲಿ ಸತತ ಕಾಣಿಸಿಕೊಂಡು ಭೀತಿ ಹುಟ್ಟಿಸಿದ್ದ ಚಿರತೆಯನ್ನು ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಜ.22 ರಂದು ಬೇಗೂರು ರಸ್ತೆಯಲ್ಲಿರುವ ಪ್ರೆಸ್ಟೀಜ್ ಸಾಂಗ್ ಅಪಾರ್ಟ್ಮೆಂಟ್ ಆವರಣದಲ್ಲಿ ಸಿಸಿಟಿವಿಯಲ್ಲಿ ಚಿರತೆಯೊಂದರ ಓಡಾಟ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಚಿರತೆಯನ್ನು ಹಿಡಿಯಲು ಕ್ಯಾಮೆರಾ ಟ್ರ್ಯಾಪ್ ಮತ್ತು ಹಲವು ಕಬ್ಬಿಣದ ಗೂಡುಗಳನ್ನು ಇರಿಸಿದರೂ ಚಿರತೆ ಪತ್ತೆಯಾಗಿರಲಿಲ್ಲ.
ಸಿಸಿಟಿವಿ ಚಿತ್ರಗಳಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆಯ ಹೆಜ್ಜೆಗುರುತುಗಳೂ ಅಲ್ಲಲ್ಲಿ ಕಾಣುತ್ತಿದ್ದವು. ರವಿವಾರ ರಾತ್ರಿ ಕೂಡ ಸ್ಥಳೀಯರ ಕಣ್ಣಿಗೆ ಈ ಚಿರತೆ ಕಾಣಿಸಿಕೊಂಡಿತ್ತು. ಬಳಿಕ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು, ಸೋಮವಾರ ಬೆಳಗ್ಗೆ 6:30 ರ ಹೊತ್ತಿಗೆ ಅಪಾರ್ಟ್ಮೆಂಟಿನ ಹಿಂಭಾಗದಲ್ಲಿ ಚಿರತೆಯನ್ನು ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಆಹಾರದ ಹುಡುಕಾಟದಲ್ಲಿ ಜನವಾಸ ಪ್ರದೇಶಕ್ಕೆ ಬಂದಿದ್ದ ಈ ಚಿರತೆಯನ್ನು ಬನ್ನೆರುಘಟ್ಟ ಅರಣ್ಯದಲ್ಲಿ ಬಿಡಲಾಗುವುದು ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.