ದರೋಡೆ ಪ್ರಕರಣ: ನೇಪಾಳ ಮೂಲದ ಏಳು ಮಂದಿ ಸೆರೆ, 60 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಜಪ್ತಿ
ಬೆಂಗಳೂರು, ಫೆ.10: ಮನೆಗಳಿಗೆ ನುಗ್ಗಿ ದರೋಡೆ ಮಾಡುತ್ತಿದ್ದ ದಂಪತಿ ಸೇರಿ ನೇಪಾಳ ದೇಶದ 7 ಮಂದಿಯನ್ನು ಬಂಧಿಸಿರುವ ಆಗ್ನೇಯ ವಿಭಾಗದ ಪೊಲೀಸರು ನಗದು ಸೇರಿ 60 ಲಕ್ಷ 10 ಸಾವಿರ ಮೌಲ್ಯದ ವಜ್ರ, ಚಿನ್ನಾಭರಣಗಳನ್ನು ಜಪ್ತಿ ಮಾಡಿದ್ದಾರೆ.
ನೇಪಾಳದ ಅಚ್ಚಾಂ ಜಿಲ್ಲೆಯ ಟಿಕಾರಾಂ(22), ಖಾಲಿಕೋಟ್ ಜಿಲ್ಲೆಯ ಪ್ರೇಮ್ ಬಹದ್ದೂರ್(45), ಆತನ ಪತ್ನಿ ಧನಾ(40), ಜನಕ್ಕುಮಾರ್(33), ಕಮಲ್(28), ಜೈಷಿ(24), ಶಾಯಿ(25) ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳ ಪೈಕಿ ಟಿಕಾರಾಂ ಕೋರಮಂಗಲದ ಮೋಹನರೆಡ್ಡಿ ಎಂಬವರ ಮನೆಯಲ್ಲಿ ಮನೆ ಕೆಲಸ ಮಾಡಿಕೊಂಡಿದ್ದು, ಮೋಹನ್ರೆಡ್ಡಿ ಅವರು ಮನೆಯಲ್ಲಿ ಪುತ್ರಿ ಸಾಗರಿಕಾಳನ್ನು ಬಿಟ್ಟು ಕೃಷ್ಣಗಿರಿಯ ಫಾರ್ಮ್ಹೌಸ್ಗೆ ಹೋಗಿದ್ದಾಗ ಸಂಚು ರೂಪಿಸಿ ಟಿಕಾರಾಂದ ಮನೆಯಲ್ಲಿದ್ದ ಚಿನ್ನ, ವಜ್ರಾಭರಣಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ ಎನ್ನಲಾಗಿದೆ.
ಪ್ರಕರಣ ದಾಖಲಿಸಿಕೊಂಡ ಕೋರಮಂಗಲ ಪೊಲೀಸರು ತನಿಖೆ ಕೈಗೊಂಡು ಮೂರು ತಂಡಗಳೊಂದಿಗೆ ಮಹಾರಾಷ್ಟ್ರ, ನೇಪಾಳದ ಗಡಿ ಹಾಗೂ ನಗರದಲ್ಲಿ ಕಾರ್ಯಾಚರಣೆ ಕೈಗೊಂಡು ಈ ಗುಂಪನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಲೆಮರೆಸಿಕೊಂಡಿರುವ ಸಂಜಯ್ ಹಾಗೂ ವಿನೋದ್ರನ್ನು ಬಂಧಿಸಲು ಪೊಲೀಸ್ ತಂಡವೊಂದು ನೇಪಾಳಕ್ಕೆ ತೆರಳಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.