ಕೊಡಲಿಯಿಂದ ಹೊಡೆದು ಪುತ್ರನನ್ನೆ ಕೊಲೆಗೈದ ತಂದೆ
ಬೆಂಗಳೂರು, ಫೆ.26: ತಂದೆಯೋರ್ವ ಪುತ್ರನನ್ನೆ ಕೊಲೆಗೈದಿರುವ ಘಟನೆ ಇಲ್ಲಿನ ಗಂಗಮ್ಮನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಅಬ್ಬಿಗೆರೆ ನಿವಾಸಿ ಹುಸೇನ್(68) ಬಂಧಿತ ತಂದೆ ಆಗಿದ್ದು, ಬಾಬರ್(30) ಎಂಬಾತ ಕೊಲೆಯಾದ ಪುತ್ರ ಎಂದು ಪೊಲೀಸರು ಗುರುತಿಸಿದ್ದಾರೆ.
ಅಬ್ಬಿಗೆರೆಯಲ್ಲಿ ವಾಸ ಮಾಡುತ್ತಿದ್ದ ಹುಸೇನ್ ಗೆ ಒಬ್ಬನೇ ಮಗನಿದ್ದು, ಪತ್ನಿ ಗೃಹಿಣಿಯಾಗಿದ್ದಾರೆ. ಜೀವನಕ್ಕಾಗಿ ಹುಸೇನ್ ಭದ್ರತಾ ಸಿಬ್ಬಂದಿ ಆಗಿ ಕೆಲಸ ಮಾಡಿದರೆ, ಪುತ್ರ ಬಾಬರ್ ಗಾರೆ ಕೆಲಸ ಮಾಡುತ್ತಿದ್ದ. ಇದರ ನಡುವೆ ಮದ್ಯ ಸೇವನೆ ಚಟ ಅಂಟಿಸಿಕೊಂಡಿದ್ದ ಮಗ ನಿತ್ಯವೂ ಮದ್ಯ ಸೇವಿಸಿ ಬಂದು ಪೋಷಕರೊಂದಿಗೆ ಜಗಳವಾಡುತ್ತಿದ್ದ ಎನ್ನಲಾಗಿದೆ.
ಗುರುವಾರ ಸಂಜೆ ಸಹ ಬಾಬರ್ ಮದ್ಯ ಸೇವಿಸಿ ಬಂದಿದ್ದಾನೆ. ಈ ವೇಳೆ ಕ್ಷುಲ್ಲಕ ಕಾರಣಕ್ಕಾಗಿ ತಂದೆ ವಿರುದ್ಧ ತಿರುಗಿಬಿದ್ದಿದ್ದಾನೆ. ನಂತರ ಜಗಳ ವಿಕೋಪಕ್ಕೆ ಹೋಗುತ್ತಿದ್ದಂತೆ ಮನೆಯಲ್ಲಿದ್ದ ಕೊಡಲಿಯನ್ನು ಕೈಗೆತ್ತಿಕೊಂಡ ತಂದೆ ಮಗನ ತಲೆಗೆ ಹೊಡೆದಿದ್ದಾರೆ. ಪರಿಣಾಮ ಆತನ ತಲೆಯಿಂದ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಮಾಹಿತಿ ಆಧರಿಸಿ ಸ್ಥಳಕ್ಕೆ ಬಂದ ಗಂಗಮ್ಮನಗುಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.