ಸರ್ಕಲ್ಗೆ ಶಾಸಕ ಹಾರಿಸ್ ಹೆಸರು ನಾಮಕರಣ: ಕಾನೂನು ಕ್ರಮ ಜರುಗಿಸುತ್ತೇವೆ ಎಂದ ಬಿಬಿಎಂಪಿ ಆಯುಕ್ತ
ಮಂಜುನಾಥ ಪ್ರಸಾದ್
ಬೆಂಗಳೂರು, ಫೆ.27: ಶಾಂತಿನಗರ ವಿಧಾನಸಭಾ ಕ್ಷೇತ್ರದ ನೀಲಸಂದ್ರ ಸರ್ಕಲ್ಗೆ ಅನಧಿಕೃತವಾಗಿ ಸ್ಥಳೀಯ ಶಾಸಕ ಎನ್.ಎ.ಹಾರಿಸ್ ಹೆಸರು ನಾಮಕರಣ ಮಾಡಿ ಭಾವಚಿತ್ರ ಅಳವಡಿಸಿದ್ದರ ಬಗ್ಗೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ತಿಳಿಸಿದರು.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಬಿಎಂಪಿಯ ಅನುಮತಿ ಇಲ್ಲದೆ, ರಸ್ತೆ ಅಥವಾ ಸರ್ಕಲ್ಗೆ ನಾಮಕರಣ ಮಾಡುವಂತಿಲ್ಲ. ಹೀಗಾಗಿ, ಶುಕ್ರವಾರ ಸಂಜೆಯೇ ಪಾಲಿಕೆ ಅಧಿಕಾರಿಗಳು ಇದನ್ನು ತೆರವು ಮಾಡಿದ್ದಾರೆ ಎಂದು ಹೇಳಿದರು.
ಅಲ್ಲದೆ, ಯಾವುದಾದರೂ ಸರ್ಕಲ್ಗೆ ಹೆಸರಿಡುವ ಮುನ್ನ ಪಾಲಿಕೆ ಸಭೆಯಲ್ಲಿ ಅನುಮೋದನೆ ಪಡೆಯಬೇಕು. ಯಾರೋ ಅಕ್ರಮ ಫಲಕ ಹಾಕಿರುವುದನ್ನು ತೆರವುಗೊಳಿಸಲಾಗಿದೆ. ಈ ಕೃತ್ಯಗೈದಿರುವವರ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗುತ್ತಿದೆ ಎಂದರು.
ತೆರಿಗೆ ಕಟ್ಟದಿದ್ದರೆ ಬೀಗ: ಮಂತ್ರಿಮಾಲ್ ತೆರಿಗೆ ಬಾಕಿ ಉಳಿಸಿಕೊಂಡಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈ ವರ್ಷ ತೆರಿಗೆ ಬಾಕಿ ಉಳಿಸಿಕೊಂಡಿರುವವರಿಗೆ ನೋಟಿಸ್ ಕೊಡಲಾಗಿದೆ. ಮಂತ್ರಿಮಾಲ್ನಿಂದ ಮೂವತ್ತು ಕೋಟಿ ರೂ. ತೆರಿಗೆ ಬಾಕಿ ಇತ್ತು. ಅದಕ್ಕಾಗಿಯೇ ಪಾಲಿಕೆ ಜಂಟಿ ಆಯುಕ್ತರ ಮೂಲಕ ಬೀಗ ಕೂಡ ಹಾಕಲಾಗಿತ್ತು. ಆದರೆ, ತೆರಿಗೆ ಪಾವತಿಗೆ ಒಂದು ವಾರ ಕಾಲಾವಕಾಶಕ್ಕೆ ಮನವಿ ಮಾಡಿದ್ದಾರೆ. ಆದರೆ, ಯಾರು ಸಹ ತೆರಿಗೆ ಪಾವತಿಗೆ ಮುಂದಾಗದಿದ್ದರೆ, ಬೀಗ ಜಡಿಯಲಾಗುವುದು ಎಂದು ತಿಳಿಸಿದರು.
ಕೋವಿಡ್: ಪ್ರಥಮ ಹಾಗೂ ದ್ವಿತೀಯ ಹಂತದ ಕೋವಿಡ್ ಲಸಿಕೆ ಚಾಲ್ತಿಯಲ್ಲಿದ್ದು, 3ನೆ ಹಂತದ ವ್ಯಾಕ್ಸಿನೇಷನ್ಗೂ ಸಿದ್ಧತೆ ನಡೆಯುತ್ತಿದೆ. ಈ ಬಗ್ಗೆ ಪಾಲಿಕೆ ವ್ಯಾಪ್ತಿಯಲ್ಲಿ 60 ವರ್ಷ ಮೇಲ್ಪಟ್ಟ ಕೊಮೊರ್ಬಿಡಿಟೀಸ್ ಇರುವ ಜನರನ್ನು ಪಟ್ಟಿ ಮಾಡಲಾಗುತ್ತಿದೆ ಎಂದರು.