ಪಿಸ್ತೂಲಿನಿಂದ ಗುಂಡು ಹಾರಿಸಿ ರೌಡಿಶೀಟರ್ ಬಂಧನ
ಬೆಂಗಳೂರು, ಮಾ.7: ಕೊಲೆಗೆ ಯತ್ನಿಸಿದ್ದ ಪ್ರಕರಣ ಸಂಬಂಧ ರೌಡಿಶೀಟರ್ ಕಿರಣ್ ಮೇಲೆ ಪಿಸ್ತೂಲಿನಿಂದ ಗುಂಡು ಹಾರಿಸಿ ರಾಜಗೋಪಾಲ್ ನಗರ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸದ್ಯ ಕಿರಣ್ ಗುಂಡೇಟಿನಿಂದ ಬಲಗಾಲಿಗೆ ಗಾಯವಾಗಿದ್ದು, ಬಂಧನ ಕಾರ್ಯಾಚರಣೆ ವೇಳೆ ನಂದಿನಿ ಲೇಔಟ್ ಬಡಾವಣೆ ಪೇದೆ ಬಸವ ಎಂಬುವರು ಗಾಯಗೊಂಡಿದ್ದು, ಈ ಇಬ್ಬರನ್ನು ಶಿವಾಜಿನಗರದ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ರವಿವಾರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಲಗ್ಗೆರೆ ವ್ಯಾಪ್ತಿಯಲ್ಲಿ ಆರೋಪಿ ಕಿರಣ್ ಇರುವ ಖಚಿತ ಮಾಹಿತಿ ಪೊಲೀಸರಿಗೆ ಸಿಕ್ಕಿದ್ದು, ಅದರ ಮೇರೆಗೆ ಪಿಎಸ್ಸೈ ನವೀದ್ ಸೇರಿದಂತೆ ಸಿಬ್ಬಂದಿ ತಂಡ, ಕಿರಣ್ನನ್ನು ಬಂಧಿಸಲು ತೆರಳಿದ್ದರು. ಈ ವೇಳೆ ಪೊಲೀಸರ ಮೇಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಘಟನೆಯಲ್ಲಿ ಪೊಲೀಸ್ ಪೇದೆ ಬಸವ ಎಂಬುವರಿಗೆ ಗಾಯವಾಗಿದೆ. ಈ ವೇಳೆ ಪಿಎಸ್ಸೈ ನವೀದ್ ಅವರು ಪಿಸ್ತೂಲಿನಿಂದ ಗುಂಡು ಹಾರಿಸಿದಾಗ ಕಿರಣ್ ಬಲಗಾಲಿಗೆ ಪೆಟ್ಟಾಗಿದೆ. ಇದೇ ವೇಳೆ ಮತ್ತೊಬ್ಬ ಆರೋಪಿ ದಾಸನನ್ನು ಬಂಧಿಸಿದ್ದಾರೆ.
ಕಿರಣ್ ಹಾಗೂ ಆತನ ಸಹಚರರ ವಿರುದ್ಧ 10ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಆತ ಜೈಲಿಗೂ ಹೋಗಿ, ಜಾಮೀನು ಮೇಲೆ ಹೊರಬಂದಿದ್ದ. ಇನ್ನು, ಮಾ.2ರಂದು ವಿನೋದ್ ಹಾಗೂ ಅವರ ಕುಟುಂಬದವರ ಮೇಲೆ ದಾಳಿ ಮಾಡಿ, ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿ ಪರಾರಿಯಾಗಿದ್ದರು. ಈ ಬಗ್ಗೆ ಪ್ರಕರಣ ದಾಖಲಾಗಿತ್ತು.