ಬಿಬಿಎಂಪಿ ಮಾಜಿ ಸದಸ್ಯನ ಕಚೇರಿ ಸಿಬ್ಬಂದಿ ಅನುಮಾನಾಸ್ಪ ಸಾವು
ಬೆಂಗಳೂರು, ಮಾ.7: ಬಿಬಿಎಂಪಿ ಮಾಜಿ ಸದಸ್ಯರೋರ್ವರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಮಿಳುನಾಡಿನ ಮದುರೈ ಮೂಲದ ಪ್ರಭು(30) ಮೃತ ವ್ಯಕ್ತಿಯಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಾಲಿಕೆಯ ಧರ್ಮರಾಯ ಸ್ವಾಮಿ ಟೆಂಪಲ್ ವಾರ್ಡ್ ನ ಮಾಜಿ ಸದಸ್ಯ ಧನರಾಜ್ ಎಂಬುವರ ಕಚೇರಿಯಲ್ಲಿ ಮ್ಯಾನೇಜರ್ ಆಗಿ ನಾಲ್ಕು ವರ್ಷಗಳಿಂದ ಕೆಲಸ ಮಾಡುತ್ತಿದ್ದ. ಕೆಲ ದಿನಗಳ ಹಿಂದೆ ಧನರಾಜ್ ಜಾಮೀನು ವಿಚಾರಕ್ಕಾಗಿ ಪ್ರಭುವಿನಿಂದ ಸಹಿ ಹಾಕಿಸಿಕೊಂಡಿದ್ದರು ಎನ್ನಲಾಗಿದೆ.
ಇದೇ ವಿಚಾರಕ್ಕಾಗಿ ಧನರಾಜ್ ಪೊಲೀಸ್ ಠಾಣೆಗೆ ಹೋಗಿ ಬಂದಿದ್ದರು ಎಂದು ಹೇಳಲಾಗುತ್ತಿದೆ. ಇನ್ನು, ಶನಿವಾರ ಎಂದಿನಂತೆ ಕೆಲಸಕ್ಕೆ ಹೋಗಿ ರಾತ್ರಿ ಕಚೇರಿಯಲ್ಲಿ ಪ್ರಭು ಮಲಗಿಕೊಂಡಿದ್ದ. ಬೆಳಗ್ಗೆ ಕಚೇರಿ ಕಟ್ಟಡದಲ್ಲೇ ನೇಣುಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಮದುವೆಯಾಗಿ ಇಬ್ಬರು ಮಕ್ಕಳಿದ್ದು, ಈತನ ಕುಟುಂಬವೂ ಮಧುರೈನಲ್ಲಿದೆ.ಮೃತ ವ್ಯಕ್ತಿ ಸಹೋದರಿ ಅಂಬಿಕಾ ಎಂಬುವರ ಜೊತೆ ವಾಸವಾಗಿದ್ದ ಎಂದು ಹೇಳಲಾಗುತ್ತಿದ್ದು, ಈ ಸಂಬಂಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ.