ಅಂತ್ಯಕ್ರಿಯೆಗೆ ಕಡಿಮೆ ಹಣ ಪಡೆಯರಿ ಎಂದವನ ಮೇಲೆ ಮಾರಣಾಂತಿಕ ಹಲ್ಲೆ: ಮೂವರ ಬಂಧನ
ಬೆಂಗಳೂರು, ಮೇ 5: ಅಂತ್ಯಕ್ರಿಯೆ ನಡೆಸಲು ಕಡಿಮೆ ಹಣ ತೆಗೆದುಕೊಳ್ಳಿ ಎನ್ನುವ ವಿಚಾರಕ್ಕೆ ವ್ಯಕ್ತಿಯ ಮೇಲೆ ದುಷ್ಕರ್ಮಿಗಳು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ವಿಲ್ಸನ್ ಗಾರ್ಡನ್ ನಿವಾಸಿ ಎಂ.ಪಾಶಾ ಹಲ್ಲೆಗೆ ಒಳಗಾಗಿದ್ದು, ಇವರು ನೀಡಿದ ದೂರಿನ ಮೇರೆಗೆ 11 ಮಂದಿ ವಿರುದ್ಧ ವಿಲ್ಸನ್ ಗಾರ್ಡನ್ ಪೊಲೀಸರು ಎಫ್ಐಆರ್ ದಾಖಲಿಸಿ ಮೂವರನ್ನು ಬಂಧಿಸಿದ್ದಾರೆ.
ಮೇ 3ರಂದು ವಿಲ್ಸನ್ ಗಾರ್ಡನ್ ಸಮೀಪ ಬಡಾಮಕಾನ್ ಮೈದಾನದ ಸ್ಮಶಾನದಲ್ಲಿ ಗುಂಡಿ ತೋಡಲು ಸುಮಾರು 10 ರಿಂದ 15 ಸಾವಿರ ರೂಪಾಯಿ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಎಂ.ಪಾಶಾ ನೇರವಾಗಿ ಸ್ಮಶಾನದ ಬಳಿ ಹೋಗಿ, ಗುಂಡಿ ತೆಗೆಯುತ್ತಿದ್ದ ಯುವಕರಿಗೆ ಅಂತ್ಯಕ್ರಿಯೆ ನಡೆಸಲು ಕಡಿಮೆ ಹಣ ತೆಗೆದುಕೊಳ್ಳಿ ಎಂದಿದ್ದಾರೆ.
ಕೋವಿಡ್ದಿಂದಾಗಿ ಜನರ ಬಳಿ ಹಣವಿಲ್ಲ, ಸ್ಮಶಾನ ಮುಂದೆ 1500 ರೂ. ಮಾತ್ರ ನಿಗದಿಪಡಿಸಿ ಬೋರ್ಡ್ ಹಾಕಿ ಎಂದು ಮನವಿ ಮಾಡಿದ್ದಾರೆ. ಇದನ್ನು ತಿರಸ್ಕರಿಸಿದ ಶಾಹೀದ್ ಮತ್ತು ಸಹಚರರು ಪಾಶಾರ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಪ್ರಕರಣ ದಾಖಲಿಸಿದ್ದು, ಪೊಲೀಸರು ಮೂವರನ್ನು ಬಂಧಿಸಿದ್ದಾರೆ