ಐಎಎಸ್ ಅಧಿಕಾರಿಗೆ ಹಲ್ಲೆ ಯತ್ನ: ತಪ್ಪಿತಸ್ಥರ ವಿರುದ್ಧ ಎಫ್ಐಆರ್ ದಾಖಲಿಸಲು ಐಎಎಸ್ ಅಧಿಕಾರಿಗಳ ಸಂಘ ಆಗ್ರಹ
ಬಿಬಿಎಂಪಿ ಬೆಡ್ ಬ್ಲಾಕಿಂಗ್ ಹಗರಣ
ಬೆಂಗಳೂರು, ಮೇ 7: ಬೆಡ್ ಬ್ಲಾಕಿಂಗ್ ಆರೋಪ ಪ್ರಕರಣ ನಡುವೆ ಐಎಎಸ್ ಅಧಿಕಾರಿ ವೈ.ಯಶವಂತ ಅವರ ಮೇಲಿನ ಹಲ್ಲೆ ಯತ್ನ ಖಂಡಿಸಿರುವ ಭಾರತೀಯ ಆಡಳಿತ ಸೇವಾ ಅಧಿಕಾರಿಗಳ ಸಂಘ, ಈ ಕೂಡಲೇ ತಪ್ಪಿತಸ್ಥರ ವಿರುದ್ಧ ಎಫ್ಐಆರ್ ದಾಖಲಿಸಲು ಆಗ್ರಹಿಸಿದೆ.
ಶುಕ್ರವಾರ ಈ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಸಂಘದ ಅಧ್ಯಕ್ಷೆ ವಂದಿತಾ ಶರ್ಮಾ, ಎ.30ರಂದು ಬೊಮ್ಮನಹಳ್ಳಿಯ ವಾರ್ ರೂಂಗೆ ನುಗ್ಗಿರುವ ದುಷ್ಕರ್ಮಿಗಳ ತಂಡ ಅಲ್ಲಿನ ಜವಾಬ್ದಾರಿ ಹೊತ್ತಿರುವ ಐಎಎಸ್ ಅಧಿಕಾರಿ ವೈ.ಯಶವಂತ ಅವರನ್ನು ನಿಂದಿಸಿ, ಹಲ್ಲೆಗೆ ಮುಂದಾಗಿರುವುದು ಖಂಡನೀಯ ಎಂದಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ಎಲ್ಲ ಅಧಿಕಾರಿಗಳು ತಮ್ಮ ಪ್ರಾಣವನ್ನು ಪಣವಾಗಿಟ್ಟುಕೊಂಡು ಕಾರ್ಯ ನಿರ್ವಹಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಗುಂಪು ಹಲ್ಲೆಗಳು ಸರಿಯಲ್ಲ. ಇದಕ್ಕೆ ಕಾರಣಕರ್ತರಾಗಿರುವ ಪ್ರತಿಯೊಬ್ಬರ ಮೇಲೂ ಮೊಕದ್ದಮೆ ದಾಖಲಿಸಿ, ಕಾನೂನು ಕ್ರಮ ಜರುಗಿಸುವಂತೆ ಅವರು ಒತ್ತಾಯಿಸಿದ್ದಾರೆ.
Next Story