ಲಾಕ್ ಡೌನ್; ಜನರಿಗೆ ಸರಕಾರ ವಿಶೇಷ ಪ್ಯಾಕೇಜ್ ಒದಗಿಸಲು ಕರ್ನಾಟಕ ಮುಸ್ಲಿಂ ಜಮಾಅತ್ ಆಗ್ರಹ
ಬೆಂಗಳೂರು : ಕೋವಿಡ್ ಎರಡನೆಯ ಅಲೆಯ ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ಸರಕಾರ ವಿಧಿಸುವ ಲಾಕ್ ಡೌನ್ ಜನ ಜೀವನದ ಮೇಲೆ ಸಂಕಷ್ಟದ ಪರಿಣಾಮ ಬೀರಲಿದ್ದು ಇದನ್ನು ಸರಕಾರ ಮನಗಂಡು ಜನರ ಸಂಕಷ್ಟ ನಿವಾರಣೆಯ ಮಾರ್ಗೋಪಾಯವನ್ನು ಮಾಡ ಬೇಕಾಗಿದೆ ಎಂದು ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಸಮಿತಿ ಸರಕಾರವನ್ನು ಆಗ್ರಹಿಸಿದೆ.
ಕಳೆದ ಬಾರಿಯ ಲಾಕ್ ಡೌನ್ ನಿಂದಾಗಿ ಸಮಾಜದ ಬಹುತೇಕ ಜನರ ಜೀವನದ ಮೇಲೆ ಪರಿಣಾಮ ಬೀರಿ ಸಂಕಷ್ಟವನ್ನು ಅನುಭವಿಸಿದ್ದರು. ಆ ಆಘಾತದ ಚೇತರಿಕೆಯ ಹಂತದಲ್ಲಿರುವಾಗಲೇ ಕೋವಿಡ್ ಎರಡನೆಯ ಅಲೆಯು ವ್ಯಾಪಕವಾಗುತ್ತಿದ್ದು ಇದರ ನಿಯಂತ್ರಣಕ್ಕಾಗಿ ಸರಕಾರ ಹೇರುವ ಲಾಕ್ ಡೌನ್ ನಿಂದ ಜನರು ಇನ್ನೊಂದು ಭಯಾನಕವಾದ, ಆರ್ಥಿಕ ಮುಗ್ಗಟ್ಟಿನಿಂದ ತತ್ತರಿಸುವ ಪರಿಸ್ಥಿತಿ ಉಂಟಾಗ ಬಾರದು.
ಜನರಿಗೆ ಅನುಕೂಲವಾಗುವಂತೆ ಸರಕಾರ ವಿಶೇಷ ಪ್ಯಾಕೇಜ್ ಘೋಷಿಸಬೇಕು. ದಿನ ಬಳಕೆಯ ವಸ್ತುಗಳನ್ನು ಒದಗಿಸುವುದು, ಮನೆ, ಅಂಗಡಿ ಮುಗ್ಗಟ್ಟುಗಳ ಮಾಸಿಕ ಬಾಡಿಗೆಗಳನ್ನು ರದ್ದು ಪಡಿಸುವುದು, ವಿದ್ಯುತ್, ನೀರು ಮೊದಲಾದವುಗಳ ಬಿಲ್ ವಸೂಲಿ ಮಾಡದೆ ಉಚಿತವಾಗಿ ನೀಡುವುದು. ಹಣಕಾಸಿನ ಮಾಸಿಕ ಪಾವತಿಯ ಕಂತುಗಳನ್ನು ಪಡೆಯದಿರುವುದು. ಈ ಮೊದಲಾದ ಪರಿಹಾರ ಕ್ರಮಗಳ ಮೂಲಕ ಜನರ ಜೀವನಕ್ಕೆ ಆಸರೆಯಾಗುವಂತೆ ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಸಮಿತಿಯು ಸರಕಾರವನ್ನುಆಗ್ರಹಿಸಿದೆ.
ವಿಶೇಷ ಪ್ಯಾಕೇಜ್ ಗಾಗಿ ಈಗಾಗಲೇ ಮುಖ್ಯಮಂತ್ರಿ, ಆಹಾರ ಮತ್ತು ಸರಬರಾಜು ಸಚಿವರು ಹಾಗೂ ರಾಜ್ಯದ ಮುಖ್ಯ ಕಾರ್ಯದರ್ಶಿ ರವಿ ಕುಮಾರ್ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.