ಬಿಬಿಎಂಪಿ ಬೆಡ್ ಬ್ಲಾಕಿಂಗ್ ಪ್ರಕರಣ: ಆರೋಗ್ಯ ಮಿತ್ರ ಅಧಿಕಾರಿ ಸೇರಿ ಮೂವರ ಬಂಧನ
ವೆಂಕಟ್ರಾವ್- ಸುಧೀರ್
ಬೆಂಗಳೂರು, ಮೇ.10: ಕೋವಿಡ್ ಸಂದರ್ಭದಲ್ಲಿ ಬಿಬಿಎಂಪಿ ಬೆಡ್ ಬ್ಲಾಕಿಂಗ್ ಹಗರಣ ಪ್ರಕರಣ ಸಂಬಂಧ ಆರೋಗ್ಯ ಮಿತ್ರ ಅಧಿಕಾರಿ ಸೇರಿ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಶಶಿಧರ್, ಸುಧೀರ್ ಉಮಾರಾಣಿ ಹಾಗೂ ವೆಂಕಟ್ರಾವ್ ಎಂಬುವರು ಬಂಧಿತ ಆರೋಪಿಗಳೆಂದು ಸಿಸಿಬಿ ಪೊಲೀಸರು ಹೇಳಿದ್ದಾರೆ.
ಆರೋಪಿ ಶಶಿಧರ್ ಎಂಬಾತ ಆರೋಗ್ಯಮಿತ್ರ ಅಧಿಕಾರಿ ಆಗಿದ್ದರೆ, ವೆಂಕಟ್ರಾವ್ ಮತ್ತು ಸುಧೀರ್ ಉಮಾರಾಣಿ ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿದ್ದರು. ಇವರು ಬಿಬಿಎಂಪಿ ವತಿಯಿಂದ ಕೋವಿಡ್ ರೋಗಿಗಳಿಗೆ ಮೀಸಲಾಗಿದ್ದ ಹಾಸಿಗೆಗಳನ್ನು ಅರ್ಹ ಫಲಾನುಭವಿಗಳಿಗೆ ಸಿಗದಂತೆ ಬೆಡ್ ಬ್ಲಾಕಿಂಗ್ ಮಾಡಿಕೊಂಡು ಅಕ್ರಮವೆಸಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಅಲ್ಲದೆ, ಆರೋಪಿಗಳು ಆಸ್ಪತ್ರೆಗಳಲ್ಲಿ ಡಿಸ್ಚಾರ್ಜ್ ಆಗಿರುವ ಹಾಗೂ ಮೃತರಾದ ರೋಗಿಗಳ ವಿವರಗಳನ್ನು ಬಿಬಿಎಂಪಿ ವಾರ್ ರೂಂ ಗಳಿಗೆ ತಿಳಿಸದೆ, ಅಕ್ರಮವಾಗಿ ಬೇರೆಯವರಿಗೆ ನೀಡುತ್ತಿದ್ದೆಂದು ತನಿಖೆಯಿಂದ ತಿಳಿದುಬಂದಿದೆ.
ಈವರೆಗೆ ಈ ಬೆಡ್ ಬ್ಲಾಕಿಂಗ್ ಪ್ರಕರಣಗಳಲ್ಲಿ ಒಟ್ಟು 7 ಜನ ಆರೋಪಿಗಳನ್ನು ಬಂಧಿಸಿ, ತನಿಖೆ ಮುಂದುವರಿಸಲಾಗಿದೆ ಎಂದು ಸಿಸಿಬಿ ಹೇಳಿದೆ.