ರೆಮ್ಡೆಸಿವಿರ್ ಅಕ್ರಮ ಮಾರಾಟ ಆರೋಪ: ಓರ್ವನ ಬಂಧನ
ಬೆಂಗಳೂರು, ಮೇ 18: ಕೋವಿಡ್ ಸಂಬಂಧ ಅಕ್ರಮವಾಗಿ ರೆಮ್ಡೆಸಿವಿರ್ ಮಾರಾಟ ಮಾಡುತ್ತಿದ್ದ ಆರೋಪದಡಿ ಓರ್ವನನ್ನು ಇಲ್ಲಿನ ಬೈಯಪ್ಪನಹಳ್ಳಿ ಠಾಣಾ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿಯ ಎರಡನೆ ಹಂತದ ಅನಂತನಗರದ ಮನು(26) ಎಂಬಾತ ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯು ಕೋನಪ್ಪನ ಅಗ್ರಹಾರದ ಕಾವೇರಿ ಆಸ್ಪತ್ರೆಯಲ್ಲಿ ಸ್ಟಾಪ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದು, ಆಸ್ಪತ್ರೆಯಲ್ಲಿನ ಐಸಿಯು ವಾರ್ಡ್ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಕೊಡುವ ರೆಮ್ಡೆಸಿವಿರ್ 2 ಡೋಸ್ಗಳಲ್ಲಿ 1 ಡೋಸೇಜನ್ನು ಮಾತ್ರ ರೋಗಿಗೆ ನೀಡಿ ಮತ್ತೊಂದನ್ನು ಕಳ್ಳತನ ಮಾಡುತ್ತಿದ್ದ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಗೊತ್ತಾಗಿದೆ.
ರೆಮ್ಡಿಸಿವಿರ್ ಚುಚ್ಚುಮದ್ದಿಗಿರುವ ಅಭಾವವನ್ನು ದುರುಪಯೋಗಪಡಿಸಿಕೊಂಡು ಒಂದು ಚುಚ್ಚುಮದ್ದನ್ನು 25 ಸಾವಿರ ರೂ.ಗಳ ಬೆಲೆಗೆ ಕಾಳಸಂತೆಯಲ್ಲಿ ಮಾರಾಟ ಮಾಡಿ ಅಕ್ರಮ ಹಣ ಸಂಪಾದನೆ ಮಾಡುತ್ತಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಪ್ರಕರಣ ಸಂಬಂಧ ಬಂಧಿತನಿಂದ 50 ಸಾವಿರ ಮೌಲ್ಯದ 13 ರೆಮ್ಡೆಸಿವಿರ್ ಚುಚ್ಚುಮದ್ದು ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಡಾ.ಶರಣಪ್ಪ ಅವರು ತಿಳಿಸಿದ್ದಾರೆ.