ಬೆಡ್ ಬ್ಲಾಕಿಂಗ್ ಹಗರಣ: ತೇಜಸ್ವಿ ಸೂರ್ಯ ಬಂಧನಕ್ಕೆ ಒತ್ತಾಯಿಸಿ ಪೊಲೀಸ್ ಆಯುಕ್ತರಿಗೆ ಕಾಂಗ್ರೆಸ್ ದೂರು
ಬೆಂಗಳೂರು, ಮೇ 26: ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ರೋಗಿಗಳಿಗೆ ಸಂಬಂಧಿಸಿದಂತೆ ನಡೆದ ಬೆಡ್ ಬ್ಲಾಕಿಂಗ್ ಪ್ರಕರಣ ಸಂಬಂಧ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಶಾಸಕ ಸತೀಶ್ ರೆಡ್ಡಿ ಅನ್ನು ಬಂಧಿಸುವಂತೆ ಕಾಂಗ್ರೆಸ್ ಪಕ್ಷದ ಮುಖಂಡರು ದೂರು ಸಲ್ಲಿಸಿದ್ದಾರೆ.
ಬುಧವಾರ ಇಲ್ಲಿನ ಹನುಮಂತನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಮುಖಂಡರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೆ ದೂರು ಸಲ್ಲಿಸಿ, ಬೆಡ್ ಬ್ಲಾಕಿಂಗ್ ಹಗರಣದ ರೂವಾರಿಗಳನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಮುಖಂಡ ಮನೋಹರ್, ಬೆಡ್ ಬ್ಲಾಕಿಂಗ್ ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ಶಾಸಕ ಸತೀಶ್ ರೆಡ್ಡಿ ಆಪ್ತ ಬಾಬು ಅನ್ನು ಬಂಧಿಸಿದ್ದಾರೆ. ಇನ್ನು, ಈತನ ವಿರುದ್ಧ ಅನೇಕ ಪ್ರಭಾವಿಗಳು ಇರುವ ಸಂಶಯ ಇದ್ದು, ತಕ್ಷಣ ಬಿಜೆಪಿ ಮುಖಂಡರನ್ನು ಬಂಧಿಸಬೇಕಾಗಿದೆ ಎಂದು ಹೇಳಿದರು.
ಮತ್ತೊಂದೆಡೆ ರಾಜ್ಯದೆಲ್ಲೆಡೆ ಕೋವಿಡ್ ಸಂಬಂಧ ಲಸಿಕೆಯ ಕೊರತೆ ಉಂಟಾಗಿದೆ.ಇದರ ನಡುವೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಖಾಸಗಿ ಆಸ್ಪತ್ರೆವೊಂದರ ರಾಯಭಾರಿ ಆಗಿ, ಲಸಿಕೆಯನ್ನು 900 ರೂ. ಕೊಟ್ಟು ಪಡೆಯುವಂತೆ ಪ್ರಚಾರ ಮಾಡುತ್ತಿದ್ದಾರೆ. ಇದರ ಮೇಲೂ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು.