ಮದ್ಯದ ಅಮಲಿನಲ್ಲಿ ಪತ್ನಿಯ ಕತ್ತು ಹಿಸುಕಿ ಕೊಲೆ
ಬೆಂಗಳೂರು, ಜೂ.13: ಮದ್ಯದ ಅಮಲಿನಲ್ಲಿ ಪತ್ನಿಯ ಕತ್ತು ಹಿಸುಕಿ ಕೊಲೆಗೈದಿರುವ ಘಟನೆ ಇಲ್ಲಿನ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಪ್ರಕೃತಿ ಲೇಔಟ್ ನಿವಾಸಿ ದಾನಮ್ಮ(45) ಕೊಲೆಯಾದ ಮಹಿಳೆ ಎಂದು ಪೊಲೀಸರು ಗುರುತಿಸಿದ್ದಾರೆ.
ಕೃತ್ಯವೆಸಗಿದ ಪತಿ ತಮಿಳುನಾಡು ಮೂಲದ ವೇಲು ಪರಾರಿಯಾಗಿದ್ದು, ಆತನಿಗಾಗಿ ತೀವ್ರ ಶೋಧ ನಡೆಸಲಾಗಿದೆ ಎಂದು ಡಿಸಿಪಿ ಡಾ.ಶರಣಪ್ಪ ತಿಳಿಸಿದ್ದಾರೆ.
ಕೊಲಿ ಕೆಲಸ ಮಾಡುತ್ತಿದ್ದ ವೇಲು ಮದ್ಯಸೇವನೆ ಮಾಡುತ್ತಿದ್ದು, ಪ್ರತಿದಿನವೂ ರಾತ್ರಿ ಕುಡಿದು ಬಂದು ಜಗಳ ತೆಗೆಯುತ್ತಿದ್ದ. ಇದರಿಂದ ಬೇಸತ್ತ ಈತನ ಪುತ್ರ ಕಾರ್ತಿಕ್ ಶನಿವಾರ ತಡ ರಾತ್ರಿ ಸ್ನೇಹಿತನ ಮನೆಗೆ ಹೋಗಿದ್ದಾನೆ. ಎಂದಿನಂತೆ ರಾತ್ರಿಯೂ ವೇಲು ಜಗಳ ತೆಗೆದಿದ್ದು, ಜಗಳ ವಿಕೋಪಕ್ಕೆ ತಿರುಗಿದಾಗ ಆಕ್ರೋಶಗೊಂಡು ಪತ್ನಿಯ ಕತ್ತು ಹಿಸುಕಿ ಕೊಲೆಗೈದು ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಸ್ನೇಹಿತನ ಮನೆಯಿಂದ ಬೆಳಗ್ಗೆ ಮನೆಗೆ ಬಂದ ಪುತ್ರ ನೋಡಿದಾಗ ತಾಯಿ ಕೊಲೆಯಾಗಿದ್ದು ಕಂಡುಬಂದಿದ್ದು, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಸ್ಥಳಕ್ಕೆ ಆಗಮಿಸಿದ ಹೆಣ್ಣೂರು ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.