ನಿರ್ಮಾಪಕ ಉಮಾಪತಿ ಗೌಡ ಹತ್ಯೆಗೆ ಸಂಚು ಪ್ರಕರಣ: ಬಾಂಬೆ ರವಿ ಸಹಚರ ರಾಜೇಶ್ ಬಂಧನ
ಉಮಾಪತಿ ಶ್ರೀನಿವಾಸ್ ಗೌಡ
ಬೆಂಗಳೂರು, ಜೂ.15: ಸಿನೆಮಾ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಅವರಿಗೆ ಕೊಲೆಗೆ ಸಂಚು ಹಾಗೂ ಬೆದರಿಕೆ ಆರೋಪ ಸಂಬಂಧ ಬಾಂಬೆ ರವಿ ಸಹಚರ ರಾಜೇಶ್ನನ್ನು ದಕ್ಷಿಣ ವಿಭಾಗದ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಬಾಂಬೆ ರವಿ ತಂಡದಲ್ಲಿ ಸಕ್ರಿಯವಾಗಿದ್ದ ರಾಜೇಶ್ ನೇಪಾಳದಲ್ಲಿ ತಲೆ ಮರೆಸಿಕೊಂಡಿದ್ದು, ಖಚಿತ ಮಾಹಿತಿಯನ್ನು ಆಧರಿಸಿ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ ಎಂದು ಡಿಸಿಪಿ ಹರೀಶ್ ಪಾಂಡೆ ತಿಳಿಸಿದ್ದಾರೆ.
ಕಳೆದ ವರ್ಷ ಉಮಾಪತಿ ಶ್ರೀನಿವಾಸ್ ಗೌಡ ಮತ್ತು ಅವರ ಸಹೋದರ ದೀಪಕ್ ಅವರ ಹತ್ಯೆಗೆ ಸಂಚು ರೂಪಿಸಲಾಗಿತ್ತು. ಅಲ್ಲದೆ, ಕೊಲೆ ಬೆದರಿಕೆ ಹಾಕಿದ್ದರು. ವ್ಯವಸ್ಥಿತವಾಗಿ ಸಂಚು ರೂಪಿಸಿ ದರೋಡೆ ಮುಂತಾದ ಭೂಗತ ಚಟುವಟಿಕೆಗಳನ್ನು ನಡೆಸಲು ಬಾಂಬೆ ರವಿ ಮತ್ತು ಆತನ ಸಹಚರರು ಸಂಚು ರೂಪಿಸಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಗೊತ್ತಾಗಿದೆ.
ಬೆಂಗಳೂರು ನಗರದಲ್ಲಿ ಹಣವಂತರಿಗೆ ಬೆದರಿಕೆ ಹಾಕುತ್ತಿದ್ದ ಈ ತಂಡದ ಕೆಲ ಸದಸ್ಯರನ್ನು ಈ ಮೊದಲೇ ವಶಕ್ಕೆ ಪಡೆಯಲಾಗಿತ್ತು. ಘಟನೆ ಕುರಿತಂತೆ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.