ಬೆಂಗಳೂರು: ಪೊಲೀಸರಿಗೆ ನಿಂದನೆ ಆರೊಪ; ವಿದೇಶಿ ಪ್ರಜೆ ಸೆರೆ
ಬೆಂಗಳೂರು, ಜು.18: ಮದ್ಯದ ಅಮಲಿನಲ್ಲಿ ಪೊಲೀಸರಿಗೆ ನಿಂದಿಸಿ, ವಾಹನ ಜಖಂಗೊಳಿಸಿದ್ದ ಆರೋಪ ಪ್ರಕರಣ ಸಂಬಂಧ ಓರ್ವನನ್ನು ಕೆಆರ್ ಪುರ ಠಾಣಾ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ನಗರದ ಚಿಕ್ಕ ಬಾಣಸವಾಡಿಯಲ್ಲಿ ನೆಲೆಸಿದ್ದ ಘಾನಾ ದೇಶದ ಮಾರ್ಗನ್ ಬಂಧಿತ ವಿದೇಶಿ ಪ್ರಜೆ ಎಂದು ಪೊಲೀಸರು ಹೇಳಿದ್ದಾರೆ.
ಜೂ.25 ರಂದು ರಾತ್ರಿ ವಾರಾಣಸಿ ಎನ್ ಕ್ಲೇವ್ ಬಳಿ ನಾಲ್ವರು ವಿದೇಶಿಯರು ಜಗಳ ಮಾಡಿಕೊಂಡಿದ್ದರು. ಈ ವೇಳೆ ಗಸ್ತು ತಿರುಗುತ್ತಿದ್ದ ಪೊಲೀಸರು ಪ್ರಶ್ನಿಸಿ ಗಲಾಟೆ ಬಿಡಿಸಿ ಮನೆಗೆ ಹೋಗುವಂತೆ ತಾಕೀತು ಮಾಡಿದ್ದರು. ಈ ಸಂದರ್ಭದಲ್ಲಿ ಮೂವರು ಪೊಲೀಸರೊಂದಿಗೆ ಕ್ಷಮೆ ಕೇಳಿ ಮನೆಗೆ ಹೋಗಿದ್ದರು. ಆದರೆ, ಮಾರ್ಗನ್ ಮಾತ್ರ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದು, ನಿಂದಿಸಿದ್ದ ಎನ್ನಲಾಗಿದೆ.
ಬಳಿಕ ಪೊಲೀಸರ ಚೀತಾ ವಾಹನಕ್ಕೆ ಢಿಕ್ಕಿ ಹೊಡೆದು ಜಖಂಗೊಳಿಸಿ ಪರಾರಿಯಾಗಿದ್ದ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಕೆಆರ್ ಪುರ ಪೊಲೀಸರು, ಹೊರ ರಾಜ್ಯಗಗಳಿಗೆ ತೆರಳಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿ ಕರೆ ತಂದಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.