ಧಾರಾಕಾರ ಮಳೆ; ಬೆಂಗಳೂರಿನ ರಸ್ತೆಗಳು ಜಲಾವೃತ
ಬೆಂಗಳೂರು, ಅ.23: ನಗರ ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಬಹುತೇಕ ಕೆಳ ಸೇತುವೆ, ರಸ್ತೆಗಳು ಜಲಾವೃತಗೊಂಡಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.
ಇಲ್ಲಿನ ಬನಶಂಕರಿ, ಓಕಳಿಪುರಂ, ವಿಂಡ್ಸರ್ ಮ್ಯಾನರ್, ರೇಸ್ಕೋರ್ಸ್ ರಸ್ತೆ, ಛಲವಾದಿ ಪಾಳ್ಯ ಸೇರಿದಂತೆ ಹಲವು ಕಡೆಗಳಲ್ಲಿ ಹೆಚ್ಚಾಗಿ ನೀರು ನುಗ್ಗಿದ್ದು, ಇಲ್ಲಿನ ನಿವಾಸಿಗಳು ತೊಂದರೆ ಅನುಭವಿಸಿದರು.
ಆರ್ಆರ್ನಗರ ವಲಯ, ಪಶ್ಚಿಮ ಭಾಗಗಳು ಮತ್ತು ದಾಸರಹಳ್ಳಿ ವಲಯದಲ್ಲಿ ರಾತ್ರಿ ಸಾಧಾರಣ ಮಳೆಯಾಗಿದೆ. ಪಶ್ಚಿಮ ವಲಯದಲ್ಲಿ ರಸ್ತೆಯಲ್ಲಿ ನೀರು ನಿಂತು ವಾಹನ ಸವಾರರು ಪರದಾಟ ನಡೆಸಿದರು.
ಅದೇರೀತಿ, ದಕ್ಷಿಣ ವಲಯ ಮತ್ತು ಪಶ್ಚಿಮ ವಲಯದಲ್ಲಿ ಮರಗಳು ನೆಲಕ್ಕುರಳಿವೆ. ಗಾಯತ್ರಿನಗರ ವಾರ್ಡಿನ ನಾರಾಯಣ ಪುರದಲ್ಲಿ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ರಾತ್ರಿಯೆಲ್ಲ ಜನರು ಜಾಗರಣೆ ಮಾಡುವಂತೆ ಆಗಿದೆ ಎಂದು ನಾಗರಿಕರು ದೂರಿದರು.
Next Story