ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಗೆ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿ: ನ.8ರಂದು ಪ್ರದಾನ
ಉಡುಪಿ, ಅ.24: ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಗೆ ಕೇಂದ್ರ ಸರಕಾರವು ಮರಣೋತ್ತರವಾಗಿ ಘೋಷಿಸಲಾದ 2020ನೇ ಸಾಲಿನ ಪದ್ಮವಿಭೂಷಣ ಪ್ರಶಸ್ತಿಯನ್ನು ನವೆಂಬರ್ 8ರಂದು ಹೊಸದಿಲ್ಲಿಯ ರಾಷ್ಟ್ರಪತಿ ಭವನದಲ್ಲಿ ಪ್ರದಾನ ಮಾಡಲಾಗುವುದು ಎಂದು ತಿಳಿದುಬಂದಿದೆ.
ಈ ಕುರಿತು ಈಗಿನ ಪೇಜಾವರ ಮಠಾಧೀಶರಾದ ಶ್ರಿ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿಗೆ ಅಧಿಕೃತ ಆಹ್ವಾನ ಬಂದಿದೆ ಎಂದು ಮಠದ ಮೂಲಗಳು ತಿಳಿಸಿವೆ.
ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರು ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸೇವೆಯನ್ನು ಪರಿಗಣಿಸಿ ಅವರಿಗೆ ಕೇಂದ್ರ ಸರಕಾರವು 2020ನೇ ಸಾಲಿನ ಪ್ರತಿಷ್ಠಿತ ಪದ್ಮವಿಭೂಷಣ ಪ್ರಶಸ್ತಿಯನ್ನು ಘೋಷಿಸಿತ್ತು. ಆದರೆ ಕೋವಿಡ್-19 ಕಾರಣದಿಂದ ಇದುವರೆಗೆ ಪ್ರಶಸ್ತಿ ಪ್ರದಾನ ನಡೆದಿರಲಿಲ್ಲ.
ಪ್ರಶಸ್ತಿ ಸ್ವೀಕರಿಸಲು ಶ್ರಿ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ನ.7ರಂದು ಹೊಸದಿಲ್ಲಿಗೆ ತೆರಳಿಲಿದ್ದಾರೆ.
ಸಚಿವ ಕಾರಜೋಳ ಟ್ವೀಟ್:
ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಗೆ ಕೇಂದ್ರ ಸರಕಾರವು ಮರಣೋತ್ತರವಾಗಿ ಪದ್ಮವಿಭೂಷಣ ಪ್ರಶಸ್ತಿಯನ್ನು ಘೋಷಿಸಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ಈ ಕುರಿತು ರವಿವಾರ ಬೆಳಗ್ಗೆ ಟ್ವೀಟ್ ಮಾಡಿರುವ ಅವರು, 'ಪರಮಪೂಜ್ಯ ಉಡುಪಿ ಅಧೋಕ್ಷಜ ಮಠದ ಪೀಠಾಧಿಪತಿಗಳಾಗಿ ನಮ್ಮೆಲ್ಲರಿಗೂ ಹಲವಾರು ವರ್ಷಗಳ ಕಾಲ ನಿರಂತರ ಮಾರ್ಗದರ್ಶನ ಮಾಡಿದ್ದ ಶ್ರೀ ವಿಶ್ವೇಶತೀರ್ಥ ಶ್ರೀಪಾದರಿಗೆ ಭಾರತ ಸರ್ಕಾರ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿ ಘೋಷಿಸಿದೆ. ಇದು ಕನ್ನಡಿಗರಾದ ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ' ಎಂದು ಹೇಳಿದ್ದಾರೆ.
ಪರಮಪೂಜ್ಯ ಉಡುಪಿ ಅಧೋಕ್ಷಜ ಮಠದ ಪೀಠಾಧಿಪತಿಗಳಾಗಿ ನಮ್ಮೆಲ್ಲರಿಗೂ ಹಲವಾರು ವರ್ಷಗಳ ಕಾಲ ನಿರಂತರ ಮಾರ್ಗದರ್ಶನ ಮಾಡಿದ್ದ ಶ್ರೀ ವಿಶ್ವೇಶತೀರ್ಥ ಶ್ರೀಪಾದ ರಿಗೆ ಭಾರತ ಸರ್ಕಾರ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿ ಘೋಷಿಸಿದ್ದು, ಇದು ಕನ್ನಡಿಗರಾದ ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ.
— Govind M Karjol (@GovindKarjol) October 24, 2021