ಬೆಂಗಳೂರು: ತೆರಿಗೆ ಪಾವತಿಸದ ಮಂತ್ರಿ ಮಾಲ್ಗೆ ಮತ್ತೆ ಬೀಗ ಹಾಕಿದ ಬಿಬಿಎಂಪಿ ಅಧಿಕಾರಿಗಳು
ಬೆಂಗಳೂರು, ನ.15: ಮಂತ್ರಿ ಮಾಲ್ಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಸೋಮವಾರದಂದು ತೆರಿಗೆ ಪಾವತಿಸದ ಹಿನ್ನೆಲೆ ಮಂತ್ರಿ ಮಾಲ್ಗೆ ಮತ್ತೆ ಬೀಗ ಹಾಕಿದ್ದರು.
ಮಲ್ಲೇಶ್ವರಂನ ಮಂತ್ರಿಮಾಲ್ ಸುಮಾರು 22 ಕೋಟಿ ತೆರಿಗೆ ಬಾಕಿ ಉಳಿಸಿಕೊಂಡಿದೆ. ಆದುದರಿಂದ ಮಂತ್ರಿಮಾಲ್ ವಿರುದ್ಧ ಬಿಬಿಎಂಪಿ ಕ್ರಮ ಕೈಗೊಂಡಿದೆ. ಕಳೆದ ಸೆ. 30ರಂದು ಮಂತ್ರಿ ಮಾಲ್ಗೆ ಬೀಗ ಹಾಕಿದ್ದಾಗ, 5 ಕೋಟಿ ತೆರಿಗೆಯನ್ನು ಪಾಲಿಕೆಗೆ ಪಾವತಿಸಿತ್ತು. ಬಾಕಿ ತೆರಿಗೆ ಹಣವನ್ನು ಪಾವತಿಗಾಗಿ ಮಾಲ್ ಗಡುವು ಕೇಳಿತ್ತು. ಪಾಲಿಕೆಯ ಆಡಳಿತ ಮಂಡಳಿಯೂ ಸಹ ಮಾಲ್ಗೆ ತೆರಿಗೆ ಹಣವನ್ನು ಪಾವತಿಸಲು ಸಮಯಾವಕಾಶ ನೀಡಿತ್ತು. ಕೊಟ್ಟ ಸಮಯಾವಕಾಶದಲ್ಲಿ ಪಾಲಿಕೆಗೆ ತೆರಿಗೆ ಹಣವನ್ನು ಪಾವತಿಸದ ಕಾರಣ ಪಾಲಿಕೆಯು ಮಂತ್ರಿಮಾಲ್ಗೆ ಸೋಮವಾರದಂದು ಬೀಗ ಹಾಕಿದೆ.
ಕಳೆದ ಮೂರು ವರ್ಷದಿಂದ ಮಂತ್ರಿಮಾಲ್ 27 ಕೋಟಿ ಬಾಕಿ ಮತ್ತು ಬಡ್ಡಿ ಸೇರಿ ಸುಮಾರು 36 ಕೋಟಿ ತೆರಿಗೆ ಹಣ ಪಾಲಿಕೆಗೆ ಕಟ್ಟಲಿಲ್ಲ. ತೆರಿಗೆ ಕಟ್ಟದ ಕಾರಣ ಮಾಲ್ ಬಾಗಿಲಿಗೆ ಬೀಗ ಹಾಕಲಾಗಿತ್ತು. ಆಯುಕ್ತರಿಂದ ಸೂಚನೆಯಂತೆ ಮಾಲ್ಗೆ 15 ದಿನಗಳ ಕಾಲಾವಕಾಶ ನೀಡಲಾಗಿದೆ. ಗಡುವು ಮುಗಿದ ಬಳಿಕ ತೆರಿಗೆ ಹಣವನ್ನು ಮಾಲ್ ಪಾವತಿಸದಿದ್ದರೆ, ಮಾಲ್ ಅನ್ನು ಪಾಲಿಕೆ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.