ಮತಾಂತರ ನಿಷೇಧ ಕಾಯ್ದೆ ಜಾರಿ ಸಂವಿಧಾನ ವಿರೋಧಿ: ಡಾ.ಸಿ.ಎಸ್.ದ್ವಾರಕಾನಾಥ್
ಬೆಂಗಳೂರು, ಡಿ. 4: ‘ರಾಜ್ಯದಲ್ಲಿ ಬಿಜೆಪಿ ಸರಕಾರ ಅಲ್ಪಸಂಖ್ಯಾತರನ್ನು ಗುರಿಯನ್ನಾಗಿಸಿಕೊಂಡು ಉದ್ದೇಶಿಸಿರುವ ‘ಮತಾಂತರ ನಿಷೇಧ ಕಾಯ್ದೆ'ಯನ್ನು ಯಾವುದೇ ಕಾರಣಕ್ಕೂ ಜಾರಿಗೆ ತರಬಾರದು' ಎಂದು ಒತ್ತಾಯಿಸಿ ಬೆಂಗಳೂರಿನ ಆರ್ಚ್ ಬಿಷಪ್ ಡಾ.ಪೀಟರ್ ಮಚಾದೊ ನೇತೃತ್ವದಲ್ಲಿ ಕ್ರೈಸ್ತ ಸಮುದಾಯದ ಬೃಹತ್ ಸಮಾವೇಶನವನ್ನು ನಡೆಸಲಾಯಿತು.
ಶನಿವಾರ ಇಲ್ಲಿನ ಕೋಲ್ಸ್ ಪಾರ್ಕ್ನಲ್ಲಿ ಏರ್ಪಡಿಸಿದ್ದ ಬೃಹತ್ ಸಮಾವೇಶದಲ್ಲಿ ಕೇಂದ್ರ ಮಾಜಿ ಸಚಿವೆ ಮಾರ್ಗರೇಟ್ ಆಳ್ವ, ಜಮಾಅತೆ ಇಸ್ಲಾಂ ಹಿಂದ್ ರಾಜ್ಯಾಧ್ಯಕ್ಷ ಡಾ.ಮುಹಮದ್ ಸಾದ್ ಬೆಳಗಾಮಿ, ಮಾಜಿ ಸಚಿವರಾದ ಕೆ.ಜೆ.ಜಾರ್ಜ್, ವಿಧಾನ ಪರಿಷತ್ ಮಾಜಿ ಸದಸ್ಯರಾದ ಐವಾನ್ ನಿಗ್ಲಿ, ಐವಾನ್ ಡಿಸೋಜಾ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್.ದಾರಕಾನಾಥ್ ಸೇರಿದಂತೆ ಕ್ರೈಸ್ತ ಸಮುದಾಯದ ಪ್ರಮುಖರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.
ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಡಾ.ಸಿ.ಎಸ್.ದ್ವಾರಕಾನಾಥ್, ‘ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರುವುದು ಸಂವಿಧಾನ ವಿರೋಧಿ. ಮಾತ್ರವಲ್ಲ, ರಾಷ್ಟ್ರೀಯತೆ ಮತ್ತು ಜನವಿರೋಧಿ. ಈ ಕಾಯ್ದೆ ಜಾರಿಗೆ ಮುಂದಾಗಿರುವವರು ದೇಶದ್ರೋಹಿಗಳು. ಸಿಎಎ, ಎನ್ಆರ್ಸಿ ಜಾರಿಗೆ ಮುಂದಾಗಿ ಸೋತ ಶಕ್ತಿಗಳೇ ಇದೀಗ ಅಲ್ಪಸಂಖ್ಯಾತರನ್ನು ಗುರಿಯಾಗಿಟ್ಟುಕೊಂಡು ಮತಾಂತರ ನಿಷೇಧ ಕಾಯ್ದೆ ಜಾರಿಗೆ ಮುಂದಾಗಿವೆ' ಎಂದು ಟೀಕಿಸಿದರು.
‘ದೇಶದಲ್ಲಿನ ನಿಜವಾದ ಹಿಂದೂಗಳಿಗೆ ಮತಾಂತರ ನಿಷೇಧ ಕಾಯ್ದೆ ಬೇಕಿಲ್ಲ. ಆದರೆ, ಈ ಕಾಯ್ದೆ ಬೇಕಿರುವುದು ಕೇವಲ ಮತೀಯವಾದಿಗಳಿಗೆ ಅಷ್ಟೇ. ಮತಾಂತರ ನಿಷೇಧದ ಬಗ್ಗೆ ಗುಲ್ಲೆಬ್ಬಿಸುವವರಿಗೆ ವಾಸ್ತವ ಸತ್ಯದ ಅರಿವಿಲ್ಲ. ಕರ್ನಾಟಕ ರಾಜ್ಯದಲ್ಲಿ 2001ರ ಜನಗಣತಿ ಪ್ರಕಾರ ಶೇ.1.90ರಷ್ಟಿರುವ ಕ್ರೈಸ್ತರ ಸಂಖ್ಯೆ, 2011ರ ಜನಗಣತಿ ಅನ್ವಯ ಶೇ.1.87ರಷ್ಟಿದೆ. ಅಂದರೆ ಮತಾಂತರ ಆದವರೆಲ್ಲ ಎಲ್ಲಿಗೆ ಹೋದರು ಎಂದು ಪ್ರಶ್ನಿಸಬೇಕಿದೆ ಎಂದು ದ್ವಾರಕಾನಾಥ್ ಕೇಳಿದರು.
‘ನಾವೆಲ್ಲರೂ ಭಾರತೀಯರು, ನಮ್ಮನ್ನು ಯಾವುದೇ ಕಾರಣಕ್ಕೂ ನಿಮ್ಮ ಸಣ್ಣತನಗಳ ಕಾರಣಗಳಿಂದ ಒಡೆಯಬೇಡಿ. ಬಹುತೇಕ ಹಿಂದೂ, ಕ್ರೈಸ್ತ, ಸಿಖ್, ಬೌದ್ಧ ಮತ್ತು ಮುಸ್ಲಿಮ್ ಎಲ್ಲರನ್ನು ಸತ್ತಮೇಲೆ ಹೂಳುತ್ತಾರೆ. ಏಕೆಂದರೆ ಅವರಿಗೆ ಈ ಭೂಮಿ ನಮ್ಮದು ಎಂಬ ಭಾವನೆ. ಆದರೆ, ಕೆಲವರನ್ನು ಮಾತ್ರ ಸುಟ್ಟು ಬೂದಿಯನ್ನು ಸಮುದ್ರಕ್ಕೆ ಬಿಟ್ಟು ಮತ್ತೆಲ್ಲಿಗೂ ಕಳುಹಿಸುತ್ತಾರೆ. ನಾವು ಎಂದೂ ಹೊರಗಿನವರಲ್ಲ' ಎಂದು ಅವರು ಪ್ರತಿಪಾದಿಸಿದರು.
‘ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರೇ ಧರ್ಮ ಆಯ್ಕೆಯಾಗಬೇಕೇ ಹೊರತು ಯಾರು ಹೇರಿಕೆ ಮಾಡಬಾರದು ಎಂದು ಹೇಳಿದ್ದಾರೆ. ಹೀಗಾಗಿಯೇ ಅವರು ತಮ್ಮ ಅಪಾರ ಸಂಖ್ಯೆಯ ಅನುಯಾಯಿಗಳೊಂದಿಗೆ ಬೌದ್ಧ ದಮ್ಮಕ್ಕೆ ದಮ್ಮಾಂತರ ಮಾಡಿದರು. ಹಿಂದುತ್ವ ಎಂದೂ ಹಿಂದೂಧರ್ಮ ಆಗಿರಲು ಸಾಧ್ಯವಿಲ್ಲ ಎಂದು ಅವರು ನುಡಿದರು.
‘ನಾನೊಬ್ಬ ಅಪ್ಪಟ ಹಿಂದೂ. ಆದರೆ, ನಾನು ಹಿಂದುತ್ವವನ್ನು ಎಂದೂ ಒಪ್ಪುವುದಿಲ್ಲ. ನನ್ನ ಹಿಂದೂಧರ್ಮ ನನಗೆ ಪರಸ್ಪರ ಸೌಹಾರ್ದತೆ, ಸೌಜನ್ಯ, ಮನುಷ್ಯ ಪ್ರೇಮವನ್ನು ಹೇಳಿಕೊಟ್ಟಿದೆಯೇ ಹೊರತು ದ್ವೇಷವನ್ನು ಹೇಳಿಕೊಟ್ಟಿಲ್ಲ. ಸಮಾನತೆ ನಮ್ಮ ಧರ್ಮದ ಮೂಲ ಆಶಯ, ನನ್ನ ಧರ್ಮ ಮನುಷ್ಯ ಕೇಂದ್ರಿತ, ಜೀವ ಕೇಂದ್ರಿತ. ಹಿಂದುತ್ವ ಎಂದರೆ ಅದು ಬರೀ ದ್ವೇಷ' ಎಂದು ಸಂಘಪರಿವಾರದ ವಿರುದ್ಧ ವಾಗ್ದಾಳಿ ನಡೆಸಿದರು.
‘ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಸಂವಿಧಾನ ವಿರೋಧಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರುವುದನ್ನು ಒಪ್ಪಲು ಸಾಧ್ಯವಿಲ್ಲ. ಸಂವಿಧಾನ ವಿರೋಧಿ ಎಂದರೆ ಅದು ದೇಶದ್ರೋಹ ಎಂದ ದ್ವಾರಕಾನಾಥ್, ಶಿಕ್ಷಣ ಮತ್ತು ಸಾಮಾಜಿಕವಾಗಿ ಹಿಂದುಳಿದಿರುವ ಕ್ರೈಸ್ತ, ಬೌದ್ಧ, ಜೈನ ಮತ್ತು ಮುಸ್ಲಿಮರು ಸೇರಿದಂತೆ ಅಲ್ಪಸಂಖ್ಯಾತ ಸಮುದಾಯ ಒಬಿಸಿ ಪಟ್ಟಿಯಲ್ಲಿದ್ದು, ಅವರ ಹಕ್ಕುಗಳ ರಕ್ಷಣೆಗೆ ಸಂವಿಧಾನವೇ ಅವಕಾಶ ಕಲ್ಪಿಸಿದ್ದು, ನಾವೆಲ್ಲರೂ ಅವುಗಳನ್ನು ರಕ್ಷಿಸಿಕೊಳ್ಳಬೇಕು ಎಂದು ಕರೆ ಕೊಟ್ಟರು.
ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿ ಸರಿಯಲ್ಲ, ಮತಾಂತರ ನೆಪದಲ್ಲಿ ಕ್ರೈಸ್ತ ಸಮುದಾಯದ ಮೇಲಿನ ಹಲ್ಲೆ, ದೌರ್ಜನ್ಯ ಖಂಡನೀಯ. ಯಾವುದೇ ರೀತಿಯ ಬಲವಂತದ ಮತಾಂತರ ಆಗಿದ್ದರೆ ಅದರ ವಿರುದ್ಧ ಕ್ರಮ ಕೈಗೊಳ್ಳಲು ಕಾನೂನಿನಲ್ಲಿ ಅವಕಾಶವಿದೆ. ಹೀಗಿರುವಾಗ ಬೇರೆ ಕಾನೂನಿನ ಅಗತ್ಯವೇನು? ಚಳಿಗಾಲದ ಅಧಿವೇಶನದಲ್ಲಿ ಉದ್ದೇಶಿತ ಮಸೂದೆ ಮಂಡಿಸುವ ತೀರ್ಮಾನವನ್ನು ಸರಕಾರ ಕೈಬಿಡಬೇಕು ಎಂದು ಸಮಾವೇಶದಲ್ಲಿ ಆಗ್ರಹಿಸಲಾಯಿತು.