ಬಂಡವಾಳಶಾಹಿಗಳ ಸೇವೆಯಲ್ಲಿ ನಿರತವಾದ ಆಡಳಿತ ಪಕ್ಷ ಕಾರ್ಮಿಕರನ್ನು ಕಡೆಗಣಿಸಿದೆ: ಎಂ.ಎನ್. ಶ್ರೀರಾಮ್
ಬೆಂಗಳೂರು, ಡಿ. 5: ಬಂಡವಾಳಶಾಹಿಗಳಿಂದ ಹಣ ಪಡೆದು ಬಂಡವಾಳಿಗರ ಸೇವೆಯಲ್ಲೇ ನಿರತವಾಗಿರುವ ಆಡಳಿತ ಪಕ್ಷಗಳು ದುಡಿಯುವ ವರ್ಗದವರನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಕಾಂಗ್ರೆಸ್ ತಂದಿರುವ ಹಾಗೂ ಬಿಜೆಪಿ ಮುಂದುವರೆಸುತ್ತಿರುವ ಖಾಸಗಿಕರಣ, ಉದಾರಿಕರಣ ನೀತಿಗಳು ಜನರನ್ನು ಬೀದಿಪಾಲು ಮಾಡಿವೆ ಎಂದು ಎಸ್ಯುಸಿಐ ಪಕ್ಷದ ಬೆಂಗಳೂರು ಜಿಲ್ಲಾ ಕಾರ್ಯದರ್ಶಿ ಎಂ.ಎನ್. ಶ್ರೀರಾಮ್ ತಿಳಿಸಿದ್ದಾರೆ.
ರವಿವಾರ ನಗರದ ಗೊರಗುಂಟೆಪಾಳ್ಯದಲ್ಲಿ ನಡೆದ ಕಟ್ಟಡ ಕಾರ್ಮಿಕರ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶವನ್ನಾಳಿದ ಎರಡು ಪಕ್ಷಗಳು ದುಡಿಯುವ ಜನರನ್ನು ಕಡೆಗಣಿಸಿವೆ. ಹೋರಾಟಗಳಿಂದಲೇ ಕಾರ್ಮಿಕರ ಸವಲತ್ತುಗಳನ್ನು ಪಡೆದುಕೊಳ್ಳಲಾಗುತ್ತಿದೆ. ಆದರೂ ಸರಕಾರಗಳು ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಗೊಳಿಸುತ್ತಿವೆ. ಆದುದರಿಂದ ಕಾರ್ಮಿಕ ವರ್ಗ, ಶೋಷಿತ ವರ್ಗ ಸಂಘಟಿತರಾಗಿ ಹೋರಾಟ ಮಾಡಬೇಕು ಎಂದರು.
ಎಸ್ಯುಸಿಐಸಿಯ ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷ ಷಣ್ಮುಗಂ ಮಾತನಾಡಿ, ಸರಕಾರವು ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡಿ, ನಾಲ್ಕು ಕೋಡ್ಗಳಾಗಿ ಮಾಡುವ ಮುಖಾಂತರ ಕಾರ್ಮಿಕರ ಹಕ್ಕುಗಳನ್ನು ಕಸಿಯಲಾಗುತ್ತಿದೆ. ಸದಾ ಭ್ರಷ್ಟಾಚಾರದಲ್ಲಿ ಕಾಲಹರಣ ಮಾಡುತ್ತಿರುವ ಸರಕಾರ ಕಟ್ಟಡ ಕಾರ್ಮಿಕರನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಸರಕಾರ ಕೂಡಲೇ ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿ ಬೋರ್ಡನ್ನು ಸ್ಥಾಪಿಸಿ, ಅದರ ಮೂಲಕ ಕಾರ್ಮಿಕರ ಹಿತಾಸಕ್ತಿ ಕಾಪಾಡಲು ಕಾರ್ಮಿಕರಿಗೆ ಅನೇಕ ಸೌಲತ್ತುಗಳನ್ನು ಕೊಡಬೇಕು ಎಂದರು. ಸಂಘಟನಾಕಾರ ಕೃಷ್ಣ, ಜಯಣ್ಣ, ಹೇಮಾವತಿ, ಅಭಯ, ನಿರ್ಮಲ ಸೇರಿದಂತೆ ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ದೇಶದ ಸಂಪತ್ತಿನ್ನು ಸೃಷ್ಟಿಸುವ ಜನರನ್ನು ಸಮಸ್ಯೆಗಳಲ್ಲಿ ಸಿಲುಕಿಸಿ, ಕೆಲವೇ ಬಂಡವಾಳಿಗರ ಪರವಾಗಿ ಆಡಳಿತ ಪಕ್ಷದವರು ಜನವಿರೋಧಿ ನೀತಿಗಳಿಗೆ ಸಹಿ ಹಾಕುತ್ತಿದ್ದಾರೆ. ಖಾಸಗೀಕರಣ ನೀತಿಗಳು ಜನರ ಜೇಬಿಗೆ ಕತ್ತರಿ ಹಾಕುತ್ತವೆ. ಇದನ್ನು ಅರ್ಥಮಾಡಿಕೊಂಡು ಜನಸಾಮಾನ್ಯರು ಒಗ್ಗಟ್ಟಾಗಿ ಧ್ವನಿ ಎತ್ತಬೇಕು. ಸರಕಾರ ಕಾರ್ಮಿಕರಿಗೆ ಕರೋನಾ ಸಂದರ್ಭದಲ್ಲಿ ರೇಷನ್ ಕಿಟ್, ಫುಡ್ ಪಾಕೆಟ್, 3 ಸಾವಿರ ರೂ.ಪ್ಯಾಕೇಜ್ ಘೋಷಣೆ ಮಾಡಿದ್ದು, ಸರಿಯಾಗಿ ಹಂಚಿಕೆ ಮಾಡಿಲ್ಲ.
ಶೋಭಾ, ಕಾರ್ಯದರ್ಶಿ, ಬೆಂಗಳೂರು ಉತ್ತರ ವಲಯ, ಎಸ್ಯುಸಿಐ