ಬಿಪಿನ್ ರಾವತ್ ಸ್ಮರಣಾರ್ಥ ಮುಹಮ್ಮದೀಯರ ಕನ್ನಡ ವೇದಿಕೆ ಸಿದ್ಧಪಡಿಸಿದ ಕ್ಯಾಲೆಂಡರ್ ಬಿಡುಗಡೆ
ಬೆಂಗಳೂರು, ಜ.1: ದೇಶದ ಸೇನಾ ವಿಭಾಗಗಳ ಮುಖ್ಯಸ್ಥರಾಗಿದ್ದ ದಿವಂಗತ ಜನರಲ್ ಬಿಪಿನ್ ರಾವತ್ ಸ್ಮರಣಾರ್ಥ ಅಖಿಲ ಕರ್ನಾಟಕ ಮುಹಮ್ಮದೀಯರ ಕನ್ನಡ ವೇದಿಕೆ ಸಿದ್ಧಪಡಿಸಿರುವ 2022ನೆ ಸಾಲಿನ ಕ್ಯಾಲೆಂಡರ್ ಅನ್ನು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಬಿಡುಗಡೆ ಮಾಡಿದರು.
ಶನಿವಾರ ನಗರದ ಮಲ್ಲೇಶ್ವರಂನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಉದ್ಘಾಟನೆ ನೆರವೇರಿಸಿದ ಬಳಿಕ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಸೇನಾ ಮುಖ್ಯಸ್ಥರಾಗಿದ್ದ ಬಿಪಿನ್ ರಾವತ್ ದೇಶಕ್ಕೆ ಸಲ್ಲಿಸಿರುವ ಸೇವೆ ಅಪಾರ ಹಾಗೂ ಅಪ್ರತಿಮವಾದದ್ದು. ಅವರ ಸ್ಮರಣಾರ್ಥಕವಾಗಿ ಕ್ಯಾಲೆಂಡರ್ ಅನ್ನು ಸಿದ್ಧಪಡಿಸಿರುವ ಮುಹಮ್ಮದೀಯರ ಕನ್ನಡ ವೇದಿಕೆಯು ಕಾರ್ಯ ನಿಸ್ಸಂದೇಹವಾಗಿ ಶ್ಲಾಘನೀಯವಾದದ್ದು ಎಂದರು.
ಮುಹಮ್ಮದೀಯರ ಕನ್ನಡ ವೇದಿಕೆಯ ಅಧ್ಯಕ್ಷ ಕನ್ನಡ ಸಮೀವುಲ್ಲಾ ಖಾನ್ ಅಧ್ಯಕ್ಷತೆಯಲ್ಲಿ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಬೆಂಗಳೂರು ನಗರ ಜಿಲ್ಲಾ ಕಸಾಪ ಅಧ್ಯಕ್ಷ ಪ್ರಕಾಶ್ ಮೂರ್ತಿ, ಮಲ್ಲೇಶ್ವರಂ ವಾರ್ಡ್ ಬಿಬಿಎಂಪಿ ಮಾಜಿ ಸದಸ್ಯ ಜೈಪಾಲ್, ವೇದಿಕೆಯ ಗೌರವ ಸಲಹೆಗಾರ ನಝೀರ್, ಮತ್ತಿಕೆರೆ ಮಸೀದಿಯ ಪದಾಧಿಕಾರಿಗಳಾದ ಶಹಜಹಾನ್ ಸಾಗರ್, ಸಮೀವುಲ್ಲಾ, ಅಮೀರ್, ಝಾಕೀರ್, ಅಕ್ರಮ್, ಮುಹಮ್ಮದ್, ಫಕ್ರುದ್ದೀನ್, ಪ್ರೊ.ಶಶಿಕುಮಾರ್ ಎಸ್.ಬಿ. ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.