ಬೆಂಗಳೂರಿನಲ್ಲಿ ವಕ್ಫ್ ಭವನ ನಿರ್ಮಾಣಕ್ಕೆ ನಿರ್ಧಾರ: ಎನ್.ಕೆ.ಮುಹಮ್ಮದ್ ಶಾಫಿ ಸಅದಿ
ಬೆಂಗಳೂರು, ಜ.11: ರಾಜಧಾನಿ ಬೆಂಗಳೂರಿನಲ್ಲಿ ವಕ್ಫ್ ಭವನ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. ವಕ್ಫ್ ಮಂಡಳಿ ವತಿಯಿಂದ ಸೂಕ್ತ ಸ್ಥಳ ಗುರುತಿಸಿದಲ್ಲಿ ರಾಜ್ಯ ಸರಕಾರದಿಂದ ಮುಂಬರುವ ಬಜೆಟ್ನಲ್ಲಿ ಅನುದಾನ ನಿಗದಿಪಡಿಸುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ ಎಂದು ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಮೌಲಾನ ಎನ್.ಕೆ.ಮುಹಮ್ಮದ್ ಶಾಫಿ ಸಅದಿ ತಿಳಿಸಿದರು.
ಮಂಗಳವಾರ ನಗರದ ಕನ್ನಿಂಗ್ಹ್ಯಾಮ್ ರಸ್ತೆಯಲ್ಲಿರುವ ರಾಜ್ಯ ವಕ್ಫ್ ಮಂಡಳಿಯ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜಧಾನಿ ಬೆಂಗಳೂರು ಸೇರಿದಂತೆ ಪ್ರತಿ ಜಿಲ್ಲೆಯಲ್ಲೂ ಒಂದು ಕೋಟಿ ರೂ.ವೆಚ್ಚದಲ್ಲಿ ವಕ್ಫ್ ಭವನಗಳನ್ನು ನಿರ್ಮಾಣ ಮಾಡಲು ಚಿಂತನೆ ನಡೆಸಲಾಗಿದೆ. ಈ ಸಂಬಂಧ ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಗಮನಕ್ಕೂ ತರಲಾಗಿದೆ ಎಂದರು.
ಶಿವಾಜಿನಗರದ ಮದ್ರಸಾ-ಎ-ನಿಸ್ವಾನ್ ಆವರಣದಲ್ಲಿರುವ ಖಾಲಿ ಜಾಗದಲ್ಲಿ ಸುಮಾರು 5 ಕೋಟಿ ರೂ.ವೆಚ್ಚದಲ್ಲಿ ನಗರದಲ್ಲಿ ವ್ಯಾಸಾಂಗ ಮಾಡುತ್ತಿರುವ, ಕೆಲಸ ಮಾಡುತ್ತಿರುವ ಹೆಣ್ಣುಮಕ್ಕಳು ಹಾಗೂ ಮಹಿಳೆಯರಿಗಾಗಿ ವಸತಿ ನಿಲಯವನ್ನು ನಿರ್ಮಿಸಿಕೊಡಲು ದಾನಿಯೊಬ್ಬರೂ ಮುಂದೆ ಬಂದಿದ್ದು, ಫೆಬ್ರವರಿ ತಿಂಗಳಲ್ಲಿ ವಸತಿ ನಿಲಯ ಕಟ್ಟಡದ ನಿರ್ಮಾಣ ಕಾರ್ಯಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಶಾಫಿ ಸಅದಿ ಹೇಳಿದರು.
ವಕ್ಫ್ ಮಂಡಳಿಯಲ್ಲಿ 45 ಹುದ್ದೆಗಳನ್ನು ಭರ್ತಿ ಮಾಡಲು ರಾಜ್ಯ ಸರಕಾರದಿಂದ ಅನುಮತಿ ಕೋರಲಾಗಿದೆ. ಈ ಪೈಕಿ 11 ಎಫ್ಡಿಎ, 23 ಎಸ್ಡಿಎ, 5 ಲೆಕ್ಕಪರಿಶೋಧಕರು ಮತ್ತು 5 ಸರ್ವೇಯರ್ಗಳಿದ್ದಾರೆ. ರಾಜ್ಯದಲ್ಲಿ 16 ಸಾವಿರ ಇಮಾಮ್ ಹಾಗೂ ಮುಅದ್ದೀನ್ಗಳಿಗೆ ವಕ್ಫ್ ಮಂಡಳಿ ವತಿಯಿಂದ ಮಾಸಿಕ ತಲಾ 4 ಸಾವಿರ ಹಾಗೂ 3 ಸಾವಿರ ರೂ.ಗಳಂತೆ ಗೌರವಧನ ನೀಡಲಾಗುತ್ತಿದೆ. ಇಮಾಮ್ ಹಾಗೂ ಮುಅದ್ದೀನ್ಗಳ ಸಂಖ್ಯೆಯನ್ನು 20 ಸಾವಿರಕ್ಕೆ ಹೆಚ್ಚಿಸುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅವರು ಹೇಳಿದರು.
ವಕ್ಫ್ ಮಂಡಳಿ ವತಿಯಿಂದ ಈವರೆಗೆ ಸೆಕ್ಷನ್ 52ರಡಿ 397 ಎಕರೆ 25 ಗುಂಟೆ ಜಮೀನನ್ನು ಮರಳಿ ವಶಕ್ಕೆ ಪಡೆಯಲಾಗಿದೆ. ಸಂಬಂಧಪಟ್ಟ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಈ ಆಸ್ತಿಗಳನ್ನು ವಕ್ಫ್ ಆಸ್ತಿಗಳೆಂದು ಘೋಷಿಸಿ ವಕ್ಫ್ ಸಂಸ್ಥೆಗಳಿಗೆ ಹಸ್ತಾಂತರಿಸುವುದು ಮಾತ್ರ ಬಾಕಿ ಉಳಿದಿದೆ. ಅದೇ ರೀತಿ, ಸೆಕ್ಷನ್ 54ರಡಿಯಲ್ಲಿ 1109 ಎಕರೆ ವಕ್ಫ್ ಆಸ್ತಿಯನ್ನು ಹಿಂಪಡೆಯಲಾಗಿದ್ದು, ಅದನ್ನು ಸಂಬಂಧಪಟ್ಟ ಸಹಾಯಕ ಆಯುಕ್ತರು ಅನುಮೋದನೆ ನೀಡಬೇಕು ಎಂದು ಅವರು ಹೇಳಿದರು.
ವಕ್ಫ್ ಆಸ್ತಿಗಳ ಘೋಷಣೆಯನ್ನು ತ್ವರಿತವಾಗಿ ಮಾಡುವಂತೆ ಜಿಲ್ಲಾಧಿಕಾರಿಗಳು ಹಾಗೂ ಸಹಾಯಕ ಆಯುಕ್ತರಿಗೆ ನಿರ್ದೇಶನ ನೀಡುವಂತೆ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಿಗೆ ಮನವಿ ಮಾಡಲಾಗಿದೆ ಎಂದು ಶಾಫಿ ಸಅದಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಕ್ಫ್ ಮಂಡಳಿಯ ಸದಸ್ಯರಾದ ಮೌಲಾನ ಮೀರ್ ಅಝರ್ ಹುಸೈನಿ ಹಾಗೂ ಜಿ.ಯಾಕೂಬ್ ಉಪಸ್ಥಿತರಿದ್ದರು.