ಬಿಜೆಪಿ ಶಾಸಕನಿಂದ ಮಹಿಳೆಗೆ ಲೈಂಗಿಕ ಕಿರುಕುಳ, ವಂಚನೆ ಆರೋಪ: ಗೃಹ ಸಚಿವರಿಗೆ ಪತ್ರ ಬರೆದ ಮಹಿಳಾ ಆಯೋಗ
ಬೆಂಗಳೂರು, ಫೆ.10: ಸೇಡಂ ತಾಲೂಕಿನ ಬಿಜೆಪಿ ಶಾಸಕರೊಬ್ಬರಿಂದ ಅನ್ಯಾಯವಾಗಿದೆ ಎಂದು ಆರೋಪಿಸಿದ ಮಹಿಳೆಗೆ ಭದ್ರತೆ ನೀಡಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ಮನವಿ ಪತ್ರ ಸಲ್ಲಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಪ್ರಮೀಳಾ ನಾಯ್ಡು, ಮಹಿಳೆಯೊಬ್ಬರಿಗೆ ಶಾಸಕರಿಂದ ಅನ್ಯಾಯವಾಗಿದೆ ಎಂದು ಮಾಧ್ಯಮಗಳ ಮೂಲಕ ಮಾಹಿತಿ ತಿಳಿದ ಬಳಿಕ ಆಯೋಗವು ಈ ಬಗ್ಗೆ ಸುಮೊಟೋ ಕೇಸ್ ದಾಖಲಿಸಿಕೊಂಡಿದೆ. ಅಲ್ಲದೇ, ಈ ಬಗ್ಗೆ ಪೊಲೀಸ್ ಆಯುಕ್ತರು, ಐಜಿಪಿ ಪ್ರವೀಣ್ ಸೂದ್ ಅವರಿಗೆ ಪತ್ರ ಬರೆಯಲಾಗಿದೆ ಎಂದರು.
ಮಹಿಳೆಗೆ ರಕ್ಷಣೆ ಕೊಡಬೇಕೆಂದು ಕೇಳಿಕೊಂಡಿದ್ದೇನೆ. ಸುಮೋಟೋ ಕೇಸ್ ಕುರಿತು ಗೃಹಮಂತ್ರಿ ಆರಗ ಜ್ಞಾನೇಂದ್ರ ಅವರಿಗೂ ಮಾಹಿತಿ ನೀಡಿದ್ದೇವೆ ಎಂದ ಅವರು, 2020ರ ಸಾಲಿನ ಮಾರ್ಚ್ನಿಂದ ಡಿಸೆಂಬರ್ 2021 ರವರೆಗೆ ಮಹಿಳಾ ಆಯೋಗಕ್ಕೆ ಒಟ್ಟು 4041 ದೂರುಗಳು ಬಂದಿವೆ. ಕೌಟುಂಬಿಕ ದೌರ್ಜನ್ಯ, ಆಸ್ತಿ ವಿವಾದ, ಕಿರುಕುಳ ಲೈಂಗಿಕ ಕಿರುಕುಳ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿವೆ. ಈ ಕುರಿತು ಗೃಹ ಮಂತ್ರಿಗಳಿಗೂ ಮಾಹಿತಿ ನೀಡಿದ್ದೇನೆ ಎಂದರು
ಆರಗ ಜ್ಞಾನೇಂದ್ರ ಮಾತನಾಡಿ, ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮಿಳಾ ನಾಯ್ಡು ಅವರು ಮಹಿಳೆಗೆ ಭದ್ರತೆ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಆ ಮಹಿಳೆಗೆ ಸರಕಾರದಿಂದ ಸೂಕ್ತ ರಕ್ಷಣೆ ನೀಡಲಾಗುವುದು ಎಂದು ತಿಳಿಸಿದರು.