ನ್ಯಾಯಾಂಗ ಜನಸಾಮಾನ್ಯರ ನಂಬಿಕೆ ಉಳಿಸಿಕೊಂಡು ಹೋಗಬೇಕು: ಸಚಿವ ಮಾಧುಸ್ವಾಮಿ
ಬೆಂಗಳೂರು, ಎ. 24: ‘ಜನಸಾಮಾನ್ಯರಿಗೆ ನ್ಯಾಯಾಂಗದ ಮೇಲೆ ಇನ್ನೂ ನಂಬಿಕೆ ಇದೆ. ಅದನ್ನು ಉಳಿಸಿಕೊಂಡು ಹೋಗಬೇಕಾಗಿದೆ' ಎಂದು ಸಣ್ಣ ನೀರಾವರಿ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರ ಖಾತೆ ಸಚಿವ ಜೆ.ಸಿ.ಮಾಧುಸ್ವಾಮಿ ಇಂದಿಲ್ಲಿ ಸಲಹೆ ನೀಡಿದ್ದಾರೆ.
ರವಿವಾರ ನಗರದ ಜಿಕೆವಿಕೆಯಲ್ಲಿ ರಾಜ್ಯ ನ್ಯಾಯಾಂಗ ಅಧಿಕಾರಿಗಳ ಸಂಘವು ಆಯೋಜಿಸಿದ್ದ ನ್ಯಾಯಾಂಗ ಅಧಿಕಾರಿಗಳ ದ್ವೈವಾರ್ಷಿಕ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ‘ಜನರಿಗೆ ನಿಗದಿತ ಅವಧಿಯಲ್ಲಿ ನ್ಯಾಯ ಸಿಗುವಂತೆ ನೋಡಿಕೊಳ್ಳಬೇಕು. ಮಾನವೀಯತೆಗಿಂತ ದೊಡ್ಡ ಕಾನೂನು ಇಲ್ಲ. ಹೀಗಾಗಿ ಕಾನೂನಿನಲ್ಲಿ ಮಾನವೀಯತೆ ಮುಖ್ಯವಾಗಿದೆ' ಎಂದು ಹೇಳಿದರು.
‘ತಂತ್ರಜ್ಞಾನವು ನಾಗಲೋಟದಲ್ಲಿ ಸಾಗುತ್ತಿದೆ. ಅದರ ಜೊತೆಗೆ ನಾವು ಪ್ರಯಾಣ ಮಾಡಬೇಕಾಗಿದೆ. ಇಲ್ಲವಾದಲ್ಲಿ ತಂತ್ರಜ್ಞಾಣ ನಮ್ಮನ್ನು ಅಂತ್ಯ ಮಾಡುತ್ತದೆ. ನ್ಯಾಯಾಂಗ ಸೇವೆ ವೇಗ ಪಡೆದುಕೊಳ್ಳಬೇಕು. ಅದ್ದರಿಂದ ನ್ಯಾಯಾಂಗವು ಡಿಜಿಟಲೈಜೇಷನ್ ಹಾಗೂ ಕಂಪ್ಯೂಟರೈಜೇಷನ್ ಆಗಬೇಕು' ಎಂದು ಅವರು ಹೇಳಿದರು.
‘ನ್ಯಾಯಾಲಯದಲ್ಲಿ ಕೇಸ್ಗಳನ್ನು ಕಡಿಮೆ ಮಾಡುವುದು ನಮ್ಮ ಗುರಿಯಾಗಿದೆ. ನ್ಯಾಯಾದೀಶರ ಜೊತೆ ಸರಕಾರ ಇದೆ. ಸರಕಾರ ನ್ಯಾಯಾಧೀಶರಿಗೆ ಎಲ್ಲ ಸವಲತ್ತು ನೀಡುತ್ತದೆ. ಡಿಜಿಟಲ್ಗೋಳಿಸಲು ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿದ್ದಲ್ಲಿ, ಸರಕಾರ ಹಣಕಾಸಿನ ಹೊರೆಯಿಲ್ಲದೆ, ಕೆಲಸ ಮಾಡುತ್ತದೆ' ಎಂದು ಅವರು ಸ್ಪಷ್ಟಪಡಿಸಿದರು.
ಸಂಘದ ಅಧ್ಯಕ್ಷ ಮಲ್ಲನಗೌಡ ಮಾತನಾಡಿ, ಅಧುನಿಕ ಮತ್ತು ಆರ್ಟಿಫಿಶಿಯಲ್ ಇಂಟಿಲಿಜೆನ್ಸ್ ಅನ್ನು ನ್ಯಾಯಾಂಗದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿಗಳಾದ ಎಸ್.ಅಬ್ದುಲ್ ನಝೀರ್, ದಿನೇಶ್ ಮಹೇಶ್ವರಿ, ರವಿ ಮಳಿಮಠ್ ಎಸ್.ಓಕಾ, ಮುಖ್ಯನ್ಯಾಯಮೂರ್ತಿಗಳಾದ ರಿತು ರಾಜ್ ಅವಸ್ಥಿ ಉಪಸ್ಥಿತರಿದ್ದರು.