ಪಿಎಂ ಕಚೇರಿಯಲ್ಲಿ ಕೆಲಸ ಕೊಡಿಸುವುದಾಗಿ ಯುವತಿಗೆ ವಂಚನೆ ಆರೋಪ: ನಕಲಿ ರಾ ಅಧಿಕಾರಿ ಬಂಧನ
ಸಾಂದರ್ಭಿಕ ಚಿತ್ರ
ಬೆಂಗಳೂರು, ಎ.30: ಪ್ರಧಾನ ಮಂತ್ರಿಯವರ ಕಚೇರಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ನಂಬಿಸಿ ಯುವತಿಯೊಬ್ಬರಿಂದ 89 ಲಕ್ಷ ರೂ. ಹಣ ಪಡೆದು ವಂಚಿಸಿರುವ ನಕಲಿ ರಾ ಅಧಿಕಾರಿಯನ್ನು ವೈಟ್ಫೀಲ್ಡ್ ವಿಭಾಗದ ಬೆಳ್ಳಂದೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ರಾಜಾಜಿನಗರದ ನಿವಾಸಿ ಮೋಹನ್ಕುಮಾರ್ ಲಕ್ಕವಳ್ಳಿ(33) ಎಂದು ಗುರುತಿಸಲಾಗಿದೆ. 2019ರಲ್ಲಿ ದೂರುದಾರರಾದ ಕುಮಾರಿ ಸುನಾಲ್ ಸಕ್ಸೇನಾ ವಿಮಾನದಲ್ಲಿ ಕೌಲಾಲಂಪುರಕ್ಕೆ ಪ್ರಯಾಣ ಮಾಡುವಾಗ ಆರೋಪಿ ಮೋಹನ್ಕುಮಾರ್ ಪರಿಚಯವಾಗಿದೆ. ಗುಪ್ತಚರ ಹಾಗೂ ರಾ ಅಧಿಕಾರಿ ಎಂದು ಹೇಳಿಕೊಂಡ ಆರೋಪಿ ಪ್ರಧಾನಮಂತ್ರಿಯವರ ಕಚೇರಿಯಲ್ಲಿ ಕೆಲಸ ಮಾಡುವುದಾಗಿ ನಂಬಿಸಿದ್ದಾನೆ.
ಸುನಾಲ್ ಅವರು ಇಟಲಿ ಮತ್ತು ಚಕ್ ಗಣರಾಜ್ಯಗಳಿಗೆ ತೆರಳಲು 2019ರ ಎಪ್ರಿಲ್ನಲ್ಲಿ ವೀಸಾಗೆ ಅರ್ಜಿ ಸಲ್ಲಿಸಿದ್ದರು. ಆ ವೇಳೆ ಅರ್ಜಿ ತಿರಸ್ಕಾರವಾಗಿತ್ತು. 2020ರ ಜನವರಿಯಲ್ಲಿ ಮತ್ತೆ ವೀಸಾಗೆ ಅರ್ಜಿ ಸಲ್ಲಿಸಿದಾಗ ಅದು ಲಭ್ಯವಾಗಿದೆ. ಈ ಹಿಂದೆ ವೀಸಾ ಅರ್ಜಿ ತಿರಸ್ಕಾರವಾಗಲು ಕಾರಣ ತಿಳಿದುಕೊಳ್ಳುವುದಾಗಿ ಹೇಳಿದ ಆರೋಪಿ ಸುನಾಲ್ ಅವರಿಂದ ಪಾಸ್ ಪೋರ್ಟ್ ವಿವರಗಳನ್ನು ಪಡೆದುಕೊಂಡಿದ್ದ. ಸ್ವಲ್ಪ ಸಮಯದ ನಂತರ ಸುನಾಲ್ ಅವರೊಂದಿಗೆ ಮಾತನಾಡಿದ ಆರೋಪಿ ಇಟಲಿ, ಚಕ್ ಗಣರಾಜ್ಯ, ಫ್ರಾನ್ಸ್ ದೇಶಗಳು ಅನುಮಾನದ ಮೇಲೆ ನಿಮ್ಮ ಪಾಸ್ಪೋರ್ಟ್ನ್ನು ಬ್ಲಾಕ್ ಲೀಸ್ಟ್ಗೆ ಹಾಕಿವೆ ಎಂದು ಹೇಳಿ ಬೆದರಿಕೆ ಹುಟ್ಟಿಸಿದ್ದಾನೆ. ಬಳಿಕ ಪಾಸ್ಪೋರ್ಟ್ನ್ನು ಬ್ಲಾಕ್ ಲೀಸ್ಟ್ನಿಂದ ತೆಗೆಸಲು, ಕೆಲಸ ಕೊಡಿಸುವ ನೆಪ ಹೇಳಿ ಮೋಹನ್ಕುಮಾರ್, ಸುನಾಲ್ನಿಂದ 89 ಲಕ್ಷ ರೂ.ಗಳನ್ನು ತನ್ನ ಬ್ಯಾಂಕ್ ಖಾತೆಗೆ ಹಾಕಿಸಿಕೊಂಡಿದ್ದಾನೆ.
ಹಣ ಪಡೆದ ಆರೋಪಿ ವಂಚನೆ ಮಾಡಿರುವುದಾಗಿ ಸುನಾಲ್ ಅವರು ಎಪ್ರಿಲ್ 29ರಂದು ಬೆಳ್ಳಂದೂರು ಪೆÇಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಳ್ಳಂದೂರು ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದದಾರೆ.