ಟೆಂಡರ್ ಪರಿಶೀಲನಾ ಸಮಿತಿ ರಚನೆ: ಸಿಎಂ ಬೊಮ್ಮಾಯಿ ನಿಲುವಿಗೆ ಆಪ್ ವಿರೋಧ
ಬೆಂಗಳೂರು, ಮೇ 11: ಟೆಂಡರ್ ಪರಿಶೀಲನಾ ಸಮಿತಿ ರಚಿಸುವ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಅವರು ತಮ್ಮ ಸಚಿವ ಸಂಪುಟ ಸದಸ್ಯರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯಾಧ್ಯಕ್ಷ ಪೃಥ್ವಿರೆಡ್ಡಿ ಹೇಳಿದ್ದಾರೆ.
ಬುಧವಾರ ನಗರದ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಟೆಂಡರ್ ಕಾಮಗಾರಿಗಳಲ್ಲಿ ಶೇ.40ರಷ್ಟು ಕಮಿಷನ್ ದಂಧೆ ನಡೆಯುತ್ತಿದೆ ಎಂದು ಆಮ್ ಆದ್ಮಿ ಪಾರ್ಟಿಯು ಹಲವು ತಿಂಗಳಿನಿಂದ ಹೇಳುತ್ತಿದೆ. ಗುತ್ತಿಗೆದಾರರ ಸಂಘಗಳು, ನಿವೃತ್ತ ಅಧಿಕಾರಿಗಳೂ ಇದನ್ನೇ ಹೇಳುತ್ತಿದ್ದಾರೆ. ಇದನ್ನು ಅಲ್ಲಗಳೆಯುತ್ತಿದ್ದ ಸಿಎಂ ಬೊಮ್ಮಾಯಿಯವರು ಈಗ 50 ಕೋಟಿ ರೂ.ಅಧಿಕ ಮೊತ್ತದ ಟೆಂಡರ್ಗಳ ಪರಿಶೀಲನೆಗೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ರತ್ನಪ್ರಭಾ ಅವರ ನೇತೃತ್ವದಲ್ಲಿ ಸಮಿತಿ ರಚಿಸಿದ್ದಾರೆ. ತಮ್ಮದೇ ಸಚಿವರ ಮೇಲೆ ಬೊಮ್ಮಾಯಿಯವರಿಗೆ ನಂಬಿಕೆಯಿಲ್ಲ ಎಂಬುದು ಇದರಿಂದಲೇ ತಿಳಿಯುತ್ತದೆ ಎಂದು ಹೇಳಿದರು.
ಸಚಿವರು ನಡೆಸುವ ಕಾಮಗಾರಿಗಳ ಮೇಲೆ ಕಣ್ಣಿಡಲು ಪರಿಶೀಲನಾ ಸಮಿತಿ ರಚಿಸಬೇಕಾದ ಸ್ಥಿತಿ ಬಂದಿರುವುದು ನಾಚಿಕೆಗೇಡಿನ ಸಂಗತಿ. ಇದರ ಬದಲು, ಭ್ರಷ್ಟ ಸಚಿವರನ್ನು ಸಚಿವ ಸಂಪುಟದಿಂದ ಉಚ್ಛಾಟಿಸಿ, ಪ್ರಾಮಾಣಿಕರನ್ನು ಸೇರಿಸಿಕೊಳ್ಳಬಹುದಿತ್ತು. ಈಗಲಾದರೂ ಸಂಪುಟ ಪುನಾರಚನೆ ಮಾಡಿ, ನಂಬಿಕೆ ಕಳೆದುಕೊಂಡಿರುವ ಸಚಿವರನ್ನು ಕೈಬಿಡಲಿ ಎಂದು ಆಗ್ರಹಿಸಿದರು.