ಶನಿವಾರ ರಾತ್ರಿಯಿಂದ ನಮ್ಮ ಮೆಟ್ರೋ ರೈಲು ಸಂಚಾರ ತಾತ್ಕಾಲಿಕ ಸ್ಥಗಿತ
ಬೆಂಗಳೂರು, ಮೇ 27: ಕಾಮಗಾರಿ ಹಿನ್ನೆಲೆ ನಾಳೆ ರಾತ್ರಿ(ಶನಿವಾರ) 9.30ರ ನಂತರ ಎಂ.ಜಿ. ರಸ್ತೆಯಿಂದ ಬೈಯಪ್ಪನಹಳ್ಳಿ ಮಾರ್ಗದ ಮೆಟ್ರೋ ರೈಲುಗಳ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿದೆ.
ಮೆಟ್ರೊ ರೈಲು ನೇರಳೆ ಮಾರ್ಗದಲ್ಲಿ ಸಿವಿಲ್ ನಿರ್ವಹಣಾ ಕಾಮಗಾರಿಯನ್ನು ಬಿಎಂಆರ್ಸಿಎಲ್ ಕೈಗೆತ್ತಿಕೊಂಡಿದ್ದು, ಎಂ.ಜಿ.ರಸ್ತೆ ಮತ್ತು ಟ್ರಿನಿಟಿ ಮೆಟ್ರೊ ನಿಲ್ದಾಣಗಳ ನಡುವೆ ಕಾಮಗಾರಿ ನಿರ್ವಹಿಸಲಾಗುತ್ತಿದೆ.
ಈ ಹಿನ್ನೆಲೆ ಬೈಯಪ್ಪನಹಳ್ಳಿಯಿಂದ ಶನಿವಾರ ಕೊನೆಯ ರೈಲು ರಾತ್ರಿ 9.10ಕ್ಕೆ ಹೊರಡಲಿದೆ. ಬೈಯಪ್ಪನಹಳ್ಳಿ ತನಕ ಹೋಗುವ ಕೊನೆಯ ರೈಲು ಕೆಂಗೇರಿ ಮೆಟ್ರೊ ನಿಲ್ದಾಣದಿಂದ 8.40ಕ್ಕೆ, ಕೆಂಪೇಗೌಡ ಮೆಟ್ರೊ ನಿಲ್ದಾಣದಿಂದ 9.10ಕ್ಕೆ ಹೊರಡಲಿದೆ.
ರಾತ್ರಿ 9.30ರ ನಂತರ ಕೆಂಗೇರಿಯಿಂದ ಎಂ.ಜಿ.ರಸ್ತೆ ತನಕ ಮಾತ್ರ ರೈಲುಗಳು ಸಂಚರಿಸಲಿವೆ. ರವಿವಾರ ಬೆಳಗ್ಗೆ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಲಿದ್ದು, ಬೆಳಗ್ಗೆ 7 ಗಂಟೆಯಿಂದ ವೇಳಾಪಟ್ಟಿಯಂತೆ ಎಲ್ಲ ಮಾರ್ಗದಲ್ಲೂ ರೈಲುಗಳ ಸಂಚಾರ ಪುನರ್ ಆರಂಭವಾಗಲಿದೆ ಎಂದು ಬಿಎಂಆರ್ಸಿಎಲ್ ಪ್ರಕಟನೆಯಲ್ಲಿ ಹೇಳಿದೆ.
Next Story