ಬೆಂಗಳೂರು | ಭಾರತ-ದಕ್ಷಿಣ ಆಫ್ರಿಕಾ ಟಿ20 ಪಂದ್ಯ: ಮಧ್ಯರಾತ್ರಿವರೆಗೂ ಮೆಟ್ರೋ ರೈಲು ಕಾರ್ಯಾಚರಣೆ
ಪೇಪರ್ ಟಿಕೆಟ್ ನೀಡಲು ನಿರ್ಧಾರ
ಬೆಂಗಳೂರು, ಜೂ.16: ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಟಿ20 ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿರುವ ಹಿನ್ನೆಲೆ, ಜೂ.19ರಂದು ಮೆಟ್ರೊ ರೈಲು ಸಂಚಾರವನ್ನು ಮಧ್ಯರಾತ್ರಿ 1 ಗಂಟೆ ತನಕ ವಿಸ್ತರಿಸಿದ್ದು, ಮಧ್ಯಾಹ್ನ 3ರಿಂದ ಪೇಪರ್ ಟಿಕೆಟ್ಗಳನ್ನು ನೀಡಲು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್ಸಿಎಲ್) ನಿರ್ಧರಿಸಿದೆ.
ಮೆಟ್ರೋ ರೈಲುಗಳು ಬೈಯಪ್ಪನಹಳ್ಳಿ, ಕೆಂಗೇರಿ, ನಾಗಸಂದ್ರ ಮತ್ತು ರೇಷ್ಮೆ ಸಂಸ್ಥೆಯ ಟೆರ್ಮಿನಲ್ಗಳಿಂದ ರಾತ್ರಿ 1 ಗಂಟೆಗೆ ಕೊನೆಯ ರೈಲುಗಳು ಹೊರಡಲಿದ್ದು, ಮೆಜೆಸ್ಟಿಕ್ ನಿಂದ ಟರ್ಮಿನಲ್ಗಳ ಕಡೆಗೆ 1.30ಕ್ಕೆ ಹೊರಡಲಿವೆ ಎಂದು ತಿಳಿಸಿದೆ.
‘50 ರೂ. ದರದ ಪೇಪರ್ ಟಿಕೇಟ್ ಪಡೆದವರು ಕಬ್ಬನ್ ಪಾರ್ಕ್ ಮೆಟ್ರೊ ರೈಲು ನಿಲ್ದಾಣದಿಂದ ಯಾವುದೇ ನಿಲ್ದಾಣಕ್ಕೆ ರಾತ್ರಿ 10 ಗಂಟೆ ನಂತರ ಪ್ರಯಾಣಿಸಬಹುದು. ಪಂದ್ಯಾವಳಿ ನೋಡಲು ಬರುವಾಗ ಎಂದಿನಂತೆ ಸ್ಮಾರ್ಟ್ಕಾರ್ಡ್ ಮತ್ತು ಟೋಕನ್ಗಳನ್ನು ಪಡೆದು ಪ್ರಯಾಣಿಸಬೇಕು. ವಾಪಸ್ ಹೋಗಲು ಪೇಪರ್ ಟಿಕೆಟ್ಗಳನ್ನು ಮಾತ್ರ ಬಳಸಲು ಅವಕಾಶ ಇದೆ’ ಎಂದು ತಿಳಿಸಿದೆ.