ಈದ್ಗಾ ಮೈದಾನ ಬಿಬಿಎಂಪಿಯದ್ದಲ್ಲ: ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ ಗಿರಿನಾಥ್
"ಮೈದಾನದಲ್ಲಿ ಕಾರ್ಯಕ್ರಮ ಆಯೋಜಿಸಲು ವಕ್ಫ್ ಮಂಡಳಿಗೆ ಅರ್ಜಿ ಸಲ್ಲಿಸಿ"
ತುಷಾರ ಗಿರಿನಾಥ್
ಬೆಂಗಳೂರು: ಸಂಘಪರಿವಾರ ಸಂಘಟನೆಗಳು ನಗರದ ಚಾಮರಾಜಪೇಟೆಯಲ್ಲಿರುವ ಈದ್ಗಾ ಮೈದಾನದಲ್ಲಿ ಕಾರ್ಯಕ್ರಮಗಳಿಗೆ ಅನುಮತಿಯನ್ನು ನೀಡುವಂತೆ ಬಿಬಿಎಂಪಿಯನ್ನು ಕೇಳಿ ಸೃಷ್ಟಿಸಿದ್ದ ವಿವಾದಕ್ಕೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ ಗಿರಿನಾಥ್ ತೆರೆ ಎಳೆದಿದ್ದಾರೆ. ಈದ್ಗಾ ಮೈದಾನವು ಬಿಬಿಎಂಪಿ ಸುಪರ್ದಿಗೆ ಬರುವುದಿಲ್ಲ. ಹಾಗಾಗಿ ಮೈದಾನದಲ್ಲಿ ಕಾರ್ಯಕ್ರಮ ಆಯೋಜಿಸಲು ವಕ್ಫ್ ಮಂಡಳಿಗೆ ಅರ್ಜಿ ಸಲ್ಲಿಸಿ ಅನುಮತಿಯನ್ನು ಪಡೆದುಕೊಳ್ಳುವಂತೆ ತಿಳಿಸಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈದ್ಗಾ ಮೈದಾನದ ವಿಚಾರದಲ್ಲಿ 1974ರಲ್ಲಿ ಸಿಟಿ ಸರ್ವೆ ನಡೆಸಿದಾಗ ಮಾಲೀಕತ್ವವನ್ನು ಉಲ್ಲೇಖಿಸಲಿಲ್ಲ. ಹಾಗಾಗಿ ಅದು ಬಿಬಿಎಂಪಿಯಲ್ಲಿ ಖಾತೆ ಇದೆ ಎಂದು ತಿಳಿದುಕೊಳ್ಳಲಾಗಿತ್ತು. ಆದರೆ ಮೈದಾನದ ಮಾಲೀಕತ್ವ ಬಿಬಿಎಂಪಿ ವ್ಯಾಪ್ತಿಯಲ್ಲಿ ಇಲ್ಲ. ಮಕ್ಕಳು ಆಟಕ್ಕಾಗಿ ಬಳಸುತ್ತಿದ್ದ ಕಾರಣ ಆಟದ ಮೈದಾನ ಎಂದು ಉಲ್ಲೇಖವಾಗಿತ್ತು. ವಕ್ಫ್ ಮಂಡಳಿಯು ಸೂಕ್ತ ದಾಖಲೆಗಳನ್ನು ಒದಗಿಸಿ ಖಾತೆ ಮಾಡಿಕೊಳ್ಳಬಹುದು ಎಂದರು.
ಈದ್ಗಾ ಮೈದಾನ ವಿವಾದದ ಆರಂಭದಲ್ಲಿ ವಕ್ಫ್ ಮಂಡಳಿ ದಾಖಲೆಗಳನ್ನು ಒದಗಿಸುವಂತೆ ತಿಳಿಸಿತ್ತು. ಆದರೆ ವಕ್ಫ್ ಮಂಡಳಿ ದಾಖಲೆಗಳನ್ನು ನೀಡದೆ, ಈದ್ಗಾ ಮೈದಾನ ತಮ್ಮ ಸುರ್ಪರ್ಧಿಗೆ ಬರುತ್ತದೆ ಎಂದು ವಾದಿಸಿತ್ತು. ಗೊಂದಲ ಹೆಚ್ಚಾದ ಬಳಿಕ ವಕ್ಫ್ ಮಂಡಳಿಗೆ ದಾಖಲೆ ಸಲ್ಲಿಸುವಂತೆ ಬಿಬಿಎಂಪಿ ನೊಟೀಸ್ ನೀಡಿತ್ತು. ವಕ್ಫ್ ಮಂಡಳಿ ನ್ಯಾಯಾಲಯದ ಆದೇಶ ಪ್ರತಿಯನ್ನು ಬಿಬಿಎಂಪಿಗೆ ಸಲ್ಲಿಸಿತ್ತು. ಅದನ್ನು ಪರಿಶೀಲಿಸಿ ಬಿಬಿಎಂಪಿ ಮೈದಾನ ತನ್ನ ಸುಪರ್ದಿಯಲ್ಲಿಲ್ಲ ಅವರು ಸ್ಪಷ್ಟಪಡಿಸಿದರು.