ಬೆಂಗಳೂರು | ಮಗಳ ಮೇಲೇ ಅತ್ಯಾಚಾರವೆಸಗಿದ ಪೊಲೀಸ್ ಅಧಿಕಾರಿ ಶ್ರೀನಿವಾಸ್: ಎರಡನೆ ಪತ್ನಿಯ ಆರೋಪ
ಬೆಂಗಳೂರು, ಜೂ.23: “ಕನ್ನಿಂಗ್ಹ್ಯಾಮ್ ರಸ್ತೆಯಲ್ಲಿರುವ ಎಸ್ಪಿ ಕಚೇರಿಯಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಶ್ರೀನಿವಾಸ್ ಅವರು ನನಗೆ ಮಾನಸಿಕ ಹಾಗೂ ದೈಹಿಕ ಕಿರುಕುಳವನ್ನು ನೀಡುತ್ತಿದ್ದಾರೆ. ಅಲ್ಲದೆ ನನ್ನ ಮಗಳನ್ನು ಅತ್ಯಾಚಾರ ಮಾಡಿದ್ದಾನೆ” ಎಂದು ಶ್ರೀನಿವಾಸ್ ಅವರ ಪತ್ನಿ ಮುಬಶ್ಶಿರ ಆರೋಪಿಸಿದ್ದಾರೆ.
ಗುರುವಾರ ಪ್ರೆಸ್ಕ್ಲಬ್ನಲ್ಲಿ ಮಾತನಾಡಿದ ಅವರು, “2012ರಲ್ಲಿ ಶ್ರೀನಿವಾಸ್ ಅವರು ನನ್ನನ್ನು ವಿವಾಹವಾದರು. ಅದಕ್ಕೂ ಮೊದಲೇ ನನಗೆ ಬೇರೆಯವರೊಂದಿಗೆ ವಿವಾಹವಾಗಿದ್ದು, ಇಬ್ಬರು ಹೆಣ್ಣು ಮಕ್ಕಳಿದ್ದರು. ಶ್ರೀನಿವಾಸ್ ಅವರನ್ನು ವಿವಾಹವಾದ ಬಳಿಕ ಅವರು ನನ್ನ ಮಕ್ಕಳ ಮೇಲೆ ಅತ್ಯಾಚಾರ ಮಾಡಿದ್ದಾರೆ. ಮೊದಲನೆ ಹೆಣ್ಣು ಮಗುವನ್ನು ಅಜ್ಜಿಯ ಮನೆಗೆ ಕಳುಹಿಸಿದ್ದು, ಎರಡನೆಯ ಮಗುವಿನ ಮೇಲೆ 2016ರಿಂದ ಅತ್ಯಾಚಾರ ನಡೆದಿದೆ” ಎಂದು ಅವರು ಆರೋಪಿಸಿದರು.
“ಈ ಕುರಿತು 2016ರಲ್ಲಿಯೇ ಜೆ.ಸಿ. ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಆದರೆ ಠಾಣೆಯಲ್ಲಿ ಎಫ್ಐಆರ್ ದಾಖಲಿಸದೆ, ರಾಜಿ ಮಾಡಿ ಕಳುಹಿಸಿದ್ದರು. ಆದರೂ ಅತ್ಯಾಚಾರ ನಿಲ್ಲಲಿಲ್ಲ, ಇದೇ ಜೂ.4ರಂದು ಮಗುವಿನ ಮೇಲೆ ಅತ್ಯಾಚಾರ ನಡೆದಾಗ ಪೊಲೀಸ್ಠಾಣೆಗೆ ದೂರು ನೀಡಲಾಯಿತು. ಆಗ ಡಿಸಿಪಿ ನೆರವಿನಿಂದ ಎಫ್ಐಆರ್ ದಾಖಲಿಸಲಾಯಿತು. ಆದರೆ ಇದುವರೆಗೂ ಆರೋಪಿಯ ವಿರುದ್ಧ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ. ಆದರೆ ಠಾಣೆಗಳಲ್ಲಿ ನನ್ನ ವಿರುದ್ಧವೇ ಪ್ರತಿದೂರುಗಳನ್ನು ದಾಖಲಿಸುತ್ತಿದ್ದಾರೆ” ಎಂದು ಅವರು ಆತಂಕ ವ್ಯಕ್ತಪಡಿಸಿದರು.
“ಶ್ರೀನಿವಾಸ್ ಅವರನ್ನು ವಿವಾಹವಾದ ಬಳಿಕ ಒಂದು ಗಂಡು ಮಗು ಹುಟ್ಟಿದ್ದು, ಎರಡನೆಯ ಮಗುವಿಗೆ ಗರ್ಭವತಿಯಾದಾಗ ಶ್ರೀನಿವಾಸ್ ಅವರು ನೀಡಿದ ದೈಹಿಕ ಮತ್ತು ಮಾನಸಿಕ ಕಿರುಕುಳದಿಂದಾಗಿ ಗರ್ಭಪಾತವಾಗಿದೆ” ಎಂದು ತಮ್ಮ ಅಳಲನ್ನು ತೋಡಿಕೊಂಡರು.
“ನಮ್ಮಿಬ್ಬರ ದಾಂಪತ್ಯದಲ್ಲಿ ಯಾವುದೇ ಧಾರ್ಮಿಕ ಭಿನ್ನಾಭಿಪ್ರಾಯಗಳು ಇದುವರೆಗೂ ಉದ್ಭವಿಸಿಲ್ಲ. ಆದರೆ ಅವರು ಮಹಿಳೆಯರ ವಿಷಯದಲ್ಲಿ ಅಮಾನವೀಯವಾಗಿ ನಡೆಸಿಕೊಳ್ಳುತ್ತಿದ್ದಾರೆ. ನನಗೂ ಅತ್ಯಾಚಾರ ಮಾಡಿದ್ದು, ಅನಾರೋಗ್ಯಕ್ಕೆ ಒಳಗಾಗಿದ್ದೇನೆ” ಎಂದು ಅವರು ಹೇಳಿದರು.
ಸರಕಾರ ಈ ಪ್ರಕರಣವನ್ನು ಗಂಬೀರವಾಗಿ ಪರಿಗಣಿಸಿ ಆರೋಪಿಯನ್ನು ನ್ಯಾಯಾಂಗಕ್ಕೆ ಒಪ್ಪಿಸಬೇಕು. ಹಾಗೆಯೇ ನನಗೆ ಯಾವುದೇ ಸಮಸ್ಯೆಯಾದರೂ ಎಸ್ಪಿ ಶ್ರೀನಿವಾಸ್ ಅವರೇ ನೇರ ಹೊಣೆ ಆಗಿರುತ್ತಾರೆ. ಹಾಗಾಗಿ ಆರೋಪಿಗೆ ಶಿಕ್ಷೆ ಆಗುವವರೆಗೂ ನನಗೂ, ನನ್ನ ಮಕ್ಕಳಿಗೂ ರಕ್ಷಣೆ ನೀಡಬೇಕು.
-ಮುಬಶ್ಶಿರ, ಸಂತ್ರಸ್ತೆ ಹಾಗೂ ಶ್ರೀನಿವಾಸ್ ಅವರ ಎರಡನೆಯ ಪತ್ನಿ