ದಶಕಗಳ ಕನಸು ನನಸಾಗುತ್ತಿರುವುದನ್ನು ಕಾಣುತ್ತಿದ್ದೇನೆ: ಝಿಯಾವುಲ್ಲಾ ಶರೀಫ್
ಹನ್ಸ್ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಕಟ್ಟಡಕ್ಕೆ ಶಂಕು ಸ್ಥಾಪನೆ
ಬೆಂಗಳೂರು, ಜೂ.23: ಮುಸ್ಲಿಮ್ ಸಮುದಾಯದ ಶೈಕ್ಷಣಿಕ ಪ್ರಗತಿಗಾಗಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ಹಾಗೂ ಉರ್ದು ಹಾಲ್ ನಿರ್ಮಿಸಬೇಕೆಂಬ ನನ್ನ ದಶಕಗಳ ಕನಸು ಈಗ ನನಸಾಗುತ್ತಿರುವುದನ್ನು ಕಾಣುತ್ತಿದ್ದೇನೆ ಎಂದು ಇಂಡಿಯಾ ಬಿಲ್ಡರ್ಸ್ ಕಾರ್ಪೋರೇಷನ್ ಹಾಗೂ ಶರೀಫ್ ಫೌಂಡೇಶನ್ ಮುಖ್ಯಸ್ಥ ಝಿಯಾವುಲ್ಲಾ ಶರೀಫ್ ಹೇಳಿದರು.
ಗುರುವಾರ ನಗರದಲ್ಲಿರುವ ಹಝ್ರತ್ ಅತಾವುಲ್ಲಾ ಶಾ ಮತ್ತು ನಬೀ ಶಾ(ಹನ್ಸ್) ದರ್ಗಾಗೆ ಸೇರಿದ ವಕ್ಫ್ ಭೂಮಿಯಲ್ಲಿ ಶರೀಫ್ ಫೌಂಡೇಶನ್ ವತಿಯಿಂದ ಸುಮಾರು 10 ಕೋಟಿ ರೂ.ವೆಚ್ಚದ ಹನ್ಸ್ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಕಟ್ಟಡ ಹಾಗೂ ಉರ್ದು ಹಾಲ್ ನಿರ್ಮಾಣದ ಶಂಕು ಸ್ಥಾಪನೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಸಮುದಾಯದ ಸೇವೆಗಾಗಿ ಅಲ್ಲಾಹ್ ನನ್ನನ್ನು ಬಳಸಿಕೊಳ್ಳುತ್ತಿರುವುದು ನನ್ನ ಸುದೈವ. ನಾನು ಇರದೆ ಇದ್ದರೂ ನಾನು ಆರಂಭಿಸಿರುವ ಈ ಕೆಲಸವನ್ನು ನನ್ನ ಕುಟುಂಬ ಸದಸ್ಯರು ಮುಂದುವರೆಸಿಕೊಂಡು ಹೋಗಬೇಕೆಂಬ ಉದ್ದೇಶದಿಂದಲೆ ಅವರನ್ನೆಲ್ಲ ಇಂದಿನ ಕಾರ್ಯಕ್ರಮಕ್ಕೆ ಕರೆದುಕೊಂಡು ಬಂದಿದ್ದೇನೆ ಎಂದು ಅವರು ಹೇಳಿದರು.
ಈ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದಲ್ಲಿ ಪ್ರವೇಶ ಪಡೆಯುವ ಎಲ್ಲ ವಿದ್ಯಾರ್ಥಿಗಳ ಶೈಕ್ಷಣಿಕ, ವಾಸ್ತವ್ಯ, ಊಟೋಪಚಾರದ ಖರ್ಚನ್ನು ಶರೀಫ್ ಫೌಂಡೇಶನ್ ವತಿಯಿಂದಲೆ ಭರಿಸಲಾಗುವುದು. ಉರ್ದು ಹಾಲ್ನಲ್ಲಿ ನಡೆಯುವಂತಹ ಸಾಂಸ್ಕøತಿಕ ಚಟುವಟಿಕೆಗಳಿಗೂ ನೆರವು ನೀಡಲಾಗುವುದು ಎಂದು ಝಿಯಾವುಲ್ಲಾ ಶರೀಫ್ ತಿಳಿಸಿದರು.
ಇದರ ಜೊತೆಗೆ, ಮಾವಳ್ಳಿ ಮಸೀದಿಗೆ ಸೇರಿದ ಜಾಗದಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಕಾಕ್ಬರ್ನ್ ರಸ್ತೆಯಲ್ಲಿ 500 ಹೆಣ್ಣುಮಕ್ಕಳಿಗಾಗಿ ವಿದ್ಯಾರ್ಥಿನಿಲಯ, ಯಶವಂತಪುರದಲ್ಲಿ ಸೆಂಟ್ರಲ್ ಮುಸ್ಲಿಮ್ ಅಸೋಸಿಯೇಷನ್(ಸಿಎಂಎ)ಗೆ ಸೇರಿದ ಜಾಗದಲ್ಲಿ 500 ಹೆಣ್ಣು ಮಕ್ಕಳಿಗಾಗಿ ವಿದ್ಯಾರ್ಥಿನಿಲಯ ಹಾಗೂ ಸಿಎಂಎ ವಿಶ್ವವಿದ್ಯಾಲಯ ನಿರ್ಮಾಣಕ್ಕಾಗಿ 5 ಕೋಟಿ ರೂ.ಗಳನ್ನು ಒದಗಿಸಲಾಗುವುದು ಎಂದು ಅವರು ಹೇಳಿದರು.
ನನ್ನ ಕನಸಿನ ಈ ಯೋಜನೆಗಳಿಗಾಗಿ ನನ್ನ ಕುಟುಂಬ ಸದಸ್ಯರು ಯಾವುದೆ ಆರ್ಥಿಕ ಹೊರೆಯನ್ನು ಹೊರಬೇಕಾದ ಅಗತ್ಯವಿಲ್ಲ.
ಇದಕ್ಕೆಲ್ಲಈಗಾಗಲೆ ಪ್ರತ್ಯೇಕ ಹಣಕಾಸಿನ ವ್ಯವಸ್ಥೆ ಮಾಡಲಾಗಿದೆ. ಅವರು ಬಯಸಿದರೆ ಮತ್ತಷ್ಟು ನೆರವು ನೀಡಲು ಸ್ವತಂತ್ರರು. ನನ್ನ ಈ ಐದು ಯೋಜನೆಗಳಿಂದ ಪ್ರೇರೇಪಿತರಾಗಿ ನನ್ನ ಇತರ ಸ್ನೇಹಿತರು ಸಹ ಸಮುದಾಯದ ಶೈಕ್ಷಣಿಕ ಪ್ರಗತಿಗೆ ಕೈ ಜೋಡಿಸಲಿ ಎಂದು ಝಿಯಾವುಲ್ಲಾ ಶರೀಫ್ ಕರೆ ನೀಡಿದರು.
ಕಾಂಗ್ರೆಸ್ ಶಾಸಕ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ಮಾತನಾಡಿ, ಝಿಯಾವುಲ್ಲಾ ಶರೀಫ್ ಅವರ 82ನೆ ಜನ್ಮದಿನ ಇಂದು. ಹಣ ಇರುವವರಿಗೆ ಅದನ್ನು ಖರ್ಚು ಮಾಡುವ ಮನಸ್ಸು ಇರಲ್ಲ. ಆದರೆ, ಝಿಯಾವುಲ್ಲಾ ಶರೀಫ್ ಅವರಿಗೆ ಅಲ್ಲಾಹ್ ಹಣದ ಜೊತೆಗೆ ಅದನ್ನು ಸಮುದಾಯದ ಏಳಿಗೆಗಾಗಿ ಖರ್ಚು ಮಾಡುವ ಮನಸ್ಸನ್ನು ನೀಡಿದ್ದಾನೆ ಎಂದರು.
10 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರದ ಜೊತೆಗೆ, ಹಮೀದ್ ಶಾ ಕಾಂಪ್ಲೆಕ್ಸ್ ಆವರಣದಲ್ಲಿ ಮಹಿಳೆಯರಿಗಾಗಿ ಹಾಸ್ಟೆಲ್ ಅನ್ನು ಅವರು ನಿರ್ಮಿಸಿಕೊಟ್ಟಿದ್ದಾರೆ. 2006ರಲ್ಲಿ ನಾನು ಮೊದಲ ಬಾರಿ ವಕ್ಫ್ ಸಚಿವನಾದ ಸಂದರ್ಭದಲ್ಲಿ ಒತ್ತುವರಿಯಾಗಿದ್ದ ಈ ಜಮೀನನ್ನು ತೆರವುಗೊಳಿಸಿದೆ. 2018ರಲ್ಲಿ ಪುನಃ ವಕ್ಫ್ ಸಚಿವನಾದಾಗ ಬೆಂಗಳೂರಿನ 65 ಪ್ರಮುಖ ವಕ್ಫ್ ಆಸ್ತಿಗಳ ಖಾತೆಗಳನ್ನು ಮಾಡಿಸಿದೆ. ಅದರಲ್ಲಿ ಇದು ಒಂದು ಎಂದು ಅವರು ಹೇಳಿದರು.
ರಾಜ್ಯದಲ್ಲಿರುವ ವಕ್ಫ್ ಆಸ್ತಿಗಳಲ್ಲಿ ಶಾಲೆ, ಕಾಲೇಜುಗಳನ್ನು ನಿರ್ಮಿಸಲು ಕ್ರಮ ಕೈಗೊಂಡರೆ ಒಳ್ಳೆಯದು. ಇದರಿಂದ ಸಮುದಾಯದ ಶೈಕ್ಷಣಿಕ ಪ್ರಗತಿಯನ್ನು ಸಾಧಿಸಬಹುದು. ಅಲ್ಲದೆ, ಈ ಸಂಸ್ಥೆಯಿಂದ ಉತ್ತಮವಾದ ಐಎಎಸ್, ಐಪಿಎಸ್, ಕೆಎಎಸ್ ಅಧಿಕಾರಿಗಳು ಹೊರಬರಲಿ ಎಂದು ಝಮೀರ್ ಅಹ್ಮದ್ ಖಾನ್ ಹಾರೈಸಿದರು.
ವಿಧಾನಸಭೆಯ ವಿರೋಧ ಪಕ್ಷದ ಉಪ ನಾಯಕ ಯು.ಟಿ.ಖಾದರ್ ಮಾತನಾಡಿ, ವಕ್ಫ್ ಬೋರ್ಡ್ ತನ್ನ ದೂರದೃಷ್ಟಿಯಿಂದ ಸಮಾಜಕ್ಕೆ ಪ್ರಯೋಜನಕಾರಿಯಾದ ಕಾರ್ಯಕ್ರಮ ಹಮ್ಮಿಕೊಂಡಿದೆ. ಝಿಯಾವುಲ್ಲಾ ಶರೀಫ್ ಅವರು ಮಾಡುತ್ತಿರುವ ಈ ಕಾರ್ಯ ಇತರ ಬಿಲ್ಡರ್ಗಳಿಗೂ ಮಾದರಿಯಾಗಲಿ. ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇಲ್ಲಿ ಅವಕಾಶಗಳು ಸಿಗಲಿ. ಲೌಕಿಕ ಹಾಗೂ ಧಾರ್ಮಿಕ ಶಿಕ್ಷಣ ಇಲ್ಲಿನ ಮಕ್ಕಳಿಗೆ ಸಿಗಲಿ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಮೌಲಾನ ಎನ್.ಕೆ.ಮುಹಮ್ಮದ್ ಶಾಫಿ ಸಅದಿ ಮಾತನಾಡಿ, ದೇಶದ ಇತಿಹಾಸದಲ್ಲೆ ವಕ್ಫ್ ಬೋರ್ಡ್ ವತಿಯಿಂದ ಐಎಎಸ್, ಐಪಿಎಸ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವನ್ನು ಆರಂಭಿಸುತ್ತಿರುವುದು ಇದೇ ಮೊದಲು. ಇಂತಹ ಸಂಸ್ಥೆ ಆರಂಭಿಸುವ ಸಂಬಂಧ ಝಿಯಾವುಲ್ಲಾ ಶರೀಫ್ ಅವರ ಜೊತೆ ಮಾತನಾಡಿದಾಗ ಅವರು ತಕ್ಷಣ ಒಪ್ಪಿಗೆ ಸೂಚಿಸಿದರು ಎಂದರು.
ಅಲ್ಲದೆ, ಸಮುದಾಯದ ಕೆಲಸ ಕಾರ್ಯಗಳಿಗಾಗಿ 50 ಕೋಟಿ ರೂ.ಗಳನ್ನು ಮೀಸಲಿರಿಸಿದ್ದೇನೆ. ಅದರಲ್ಲಿನ ಒಂದು ಭಾಗವನ್ನು ಈ ಕೇಂದ್ರಕ್ಕೆ ನೀಡುತ್ತೇನೆ. ನೀವು ನನಗೆ ಭೂಮಿ ನೀಡಿದರೆ ಸಾಕು, ಕಟ್ಟಡವನ್ನು ನಾವೇ ನಿರ್ಮಿಸುತ್ತೇವೆ ಎಂದು ಹೇಳಿದ್ದರು. ಅದರಂತೆ, ಎಲ್ಲ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಇಂದು ಅವರ ಜನ್ಮದಿನದಂದೆ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಆದಷ್ಟು ಬೇಗ ಈ ಕಟ್ಟಡ ನಿರ್ಮಿಸಿ, ಅವರು ಸಮುದಾಯಕ್ಕೆ ಕೊಡುಗೆ ನೀಡಲಿ ಎಂದು ಅವರು ಹಾರೈಸಿದರು.
ರಾಜ್ಯದಲ್ಲಿರುವ ವಕ್ಫ್ ಆಸ್ತಿಗಳನ್ನು ಸಮುದಾಯದ ಶೈಕ್ಷಣಿಕ ಉದ್ದೇಶಗಳಿಗೆ ಆದ್ಯತೆ ಮೇರೆಗೆ ಬಳಕೆ ಮಾಡಲು ನಮ್ಮ ಬೋರ್ಡ್ ಈಗಾಗಲೆ ತೀರ್ಮಾನ ಕೈಗೊಂಡಿದೆ. ಆ ನಿಟ್ಟಿನಲ್ಲಿ ಇದು ಮೊದಲ ಹೆಜ್ಜೆಯಾಗಿದೆ ಎಂದು ಶಾಫಿ ಸಅದಿ ಹೇಳಿದರು.
ಕಾರ್ಯಕ್ರಮದಲ್ಲಿ ಝಿಯಾವುಲ್ಲಾ ಶರೀಫ್ ಅವರ ಪತ್ನಿ ಹುಸ್ನಾ ಶರೀಫ್, ಅಮೀರೆ ಶರೀಅತ್ ಮೌಲಾನ ಸಗೀರ್ ಅಹ್ಮದ್ ಖಾನ್ ರಶಾದಿ, ಮೌಲಾನ ಮಕ್ಸೂದ್ ಇಮ್ರಾನ್ ರಶಾದಿ, ಮಾಜಿ ಸಚಿವ ನಸೀರ್ ಅಹ್ಮದ್, ಶಾಸಕ ಉದಯ್ ಗರುಡಾಚಾರ್, ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಝೀಮ್, ಕೆಎಂಡಿಸಿ ಅಧ್ಯಕ್ಷ ಮುಖ್ತಾರ್ ಹುಸೇನ್ ಪಠಾಣ್, ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಝಫ್ರುಲ್ಲಾ ಖಾನ್, ಮಾಜಿ ಸಚಿವ ಆರ್.ರೋಷನ್ ಬೇಗ್, ಹಝ್ರತ್ ಅತಾವುಲ್ಲಾ ಶಾ ಮತ್ತು ನಬಿ ಶಾ ದರ್ಗಾ ಸಮತಿಯ ಅಧ್ಯಕ್ಷ ಮುಹಮ್ಮದ್ ಉಬೇದುಲ್ಲಾ ಶರೀಫ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಮುಸ್ಲಿಮ್ ಸಮುದಾಯದ ಮಕ್ಕಳು ಶೈಕ್ಷಣಿಕವಾಗಿ ಮುಂದೆ ಬರಬೇಕು ಎಂಬುದು ನಮ್ಮ ಉದ್ದೇಶ. ಸುಶಿಕ್ಷಿತ ಯುವ ಸಮೂಹವು ದೇಶದ ಭವಿಷ್ಯ ನಿರ್ಮಾಣ ಮಾಡಲಿದೆ. ಸಮಾಜದ ಏಳಿಗೆಗಾಗಿ ನಮ್ಮ ಸರಕಾರ ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ವಕ್ಫ್ ಭೂಮಿಯಲ್ಲಿ ಮಕ್ಕಳಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ ನಿರ್ಮಿಸಿಕೊಡುತ್ತಿರುವ ಝಿಯಾವುಲ್ಲಾ ಶರೀಫ್ ಅವರಿಗೆ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಆಡಿಯೋ ಸಂದೇಶ ರವಾನಿಸಿದ್ದರು.