ಪ್ರಧಾನಿ ಭೇಟಿಗಾಗಿ ಅಭಿವೃದ್ಧಿಪಡಿಸಿದ ರಸ್ತೆ ಕುಸಿತ; ಮೂವರು ಎಂಜಿನಿಯರ್ಗಳಿಗೆ ಬಿಬಿಎಂಪಿಯಿಂದ ಶೋಕಾಸ್ ನೋಟಿಸ್
ಫೈಲ್ ಚಿತ್ರ
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಭೇಟಿ ವೇಳೆ ರಾಜಧಾನಿ ಬೆಂಗಳೂರಿನಲ್ಲಿ ಅಭಿವೃದ್ಧಿ ಪಡಿಸಲಾಗಿದ್ದ ರಸ್ತೆ ಕುಸಿದಿದ್ದು, ಈ ಹಿನ್ನೆಲೆಯಲ್ಲಿ ರಸ್ತೆ ಕಾಮಗಾರಿ ನಿರ್ವಹಿಸಿದ್ದ ಬಿಬಿಎಂಪಿಯ ಮೂವರು ಎಂಜಿನಿಯರ್ಗಳಿಗೆ ಬಿಬಿಎಂಪಿ ಶೋಕಾಸ್ ನೋಟಿಸ್ ಕೊಟ್ಟಿದೆ.
ಆರ್.ಆರ್.ನಗರ ಎಕ್ಸಿಕ್ಯೂಟಿವ್ ಎಂಜಿನಿಯರ್ ಎಂ.ಟಿ.ಬಾಲಾಜಿ, ಆರ್.ಆರ್.ನಗರದ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್ ಹೆಚ್.ಜೆ.ರವಿ, ಆರ್.ಆರ್.ನಗರ ಅಸಿಸ್ಟೆಂಟ್ ಎಂಜಿನಿಯರ್ ಐ.ಕೆ.ವಿಶ್ವಾಸ್ಗೆ ನೋಟಿಸ್ ನೀಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಜೂ. 20ರಂದು ಬೆಂಗಳೂರಿಗೆ ಬಂದಿದ್ದರು. ಪ್ರಧಾನಿ ಮೋದಿ ಸಾಗುವ ರಸ್ತೆ ಅಭಿವೃದ್ಧಿಗಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸುಮಾರು 24 ಕೋಟಿ ರೂ ವೆಚ್ಚ ಮಾಡಿತ್ತು. ಈ ಪೈಕಿ ಜ್ಞಾನಭಾರತಿಯ ಡಾ.ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕಾನಮಿಕ್ಸ್ (ಬೇಸ್) ಕ್ಯಾಂಪಸ್ ಬಳಿ 6 ಕೋಟಿ ರೂ ವೆಚ್ಚದಲ್ಲಿ ರಸ್ತೆ ಡಾಂಬರೀಕರಣ ಮಾಡಲಾಗಿತ್ತು. ಇದೇ ರಸ್ತೆ ಇದೀಗ ಕುಸಿದು ಹೋಗಿದೆ.
ಇದೀಗ ರಸ್ತೆ ಕಾಮಗಾರಿ ನಿರ್ವಹಿಸಿದ್ದ ಮೂವರು ಇಂಜಿನಿಯರ್ ಗಳಿಗೆ ಬಿಬಿಎಂಪಿಯ ರೋಡ್ ಇನ್ಫ್ರಾಸ್ಟ್ರಕ್ಚರ್ ಚೀಫ್ ಎಂಜಿನಿಯರ್ರಿಂದ ಶೋಕಾಸ್ ನೋಟಿಸ್ ನೀಡಲಾಗಿದೆ.
ಇದನ್ನೂ ಓದಿ... ರಾಷ್ಟ್ರಪತಿ, ಪ್ರಧಾನಿ ಬಂದರಷ್ಟೇ ರಸ್ತೆ ದುರಸ್ತಿ ಕೈಗೊಳ್ಳುತ್ತೀರಾ?: ಬಿಡಿಎ ವಿರುದ್ಧ ಹೈಕೋರ್ಟ್ ಅಸಮಾಧಾನ