ಪತ್ರಕರ್ತ ಝಬೈರ್, ತೀಸ್ತಾ ಸೆಟಲ್ವಾಡ್ ಬಂಧನ ಖಂಡಿಸಿದ 'ದ್ವೇಷದ ಮಾತುಗಳ ವಿರುದ್ಧದ ಅಭಿಯಾನ'
ಪತ್ರಕರ್ತ ಝಬೈರ್ | ತೀಸ್ತಾ ಸೆಟಲ್ವಾಡ್
ಬೆಂಗಳೂರು, ಜೂ. 29: ‘ಪತ್ರಕರ್ತ ಮುಹಮ್ಮದ್ ಝುಬೈರ್ ಹಾಗೂ ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಅವರ ಬಂಧನವನ್ನು ‘ದ್ವೇಷದ ಮಾತುಗಳ ವಿರುದ್ಧದ ಅಭಿಯಾನ'ವು ತೀವ್ರವಾಗಿ ಖಂಡಿಸಿದೆ.
ಬುಧವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅಭಿಯಾನದ ಕಾರ್ಯಕರ್ತೆ ಸ್ವಾತಿ ಶಿವಾನಂದ್, ‘ಮೇಲ್ಕಂಡ ಬಂಧಿತ ಇಬ್ಬರ ವಿರುದ್ಧವೂ ಅಧಿಕೃತವಾಗಿ ಯಾವುದೇ ಆರೋಪಗಳು ಇಲ್ಲದೆ ಇದ್ದರೂ ಅವರನ್ನು ತಪ್ಪಿತಸ್ಥರೆಂದು ಕೆಲ ಮಾಧ್ಯಮಗಳು ಅವರ ವಿರುದ್ಧ ದ್ವೇಷದ ಮಾತುಗಳನ್ನು ಬಿತ್ತರಿಸುವುದು ಸರಿಯಲ್ಲ' ಎಂದು ಆಕ್ಷೇಪಿಸಿದ್ದಾರೆ.
‘ಝುಬೈರ್ ಮತ್ತು ಟೀಸ್ಟಾ ಬಂಧನ ಸಂದರ್ಭದಲ್ಲಿ ಯಾವುದೇ ಕಾನೂನು ಪಾಲಿಸಿಲ್ಲ. ಇವರಿಬ್ಬರ ವಿರುದ್ಧ ಸರಕಾರದ ಬಳಿ ಇರುವ ಸಾಕ್ಷ್ಯಗಳೇನು ಎಂಬುದರ ಬಗ್ಗೆಯೂ ಗೊತ್ತಿಲ್ಲ. ಆಧಾರರಹಿತ ಆರೋಪಗಳನ್ನು ಹೊರಿಸಿ ಮೇಲ್ಕಂಡ ಇಬ್ಬರನ್ನು ಬಂಧಿಸಿರುವುದು ಕಾನೂನು ಹಾಗೂ ಸಂವಿಧಾನ ಬಾಹಿರ. ಹೀಗಿರುವಾಗ ಕೆಲ ಮಾಧ್ಯಮಗಳನ್ನು ಅವರುಗಳ ವಿರುದ್ಧ ದ್ವೇಷ ಬಿತ್ತುವ ಕೆಲಸ ಮಾಡುತ್ತಿರುವುದು ಮಾಧ್ಯಮಗಳಿಗೆ ಶೋಭೆ ತರುವುದಿಲ್ಲ' ಎಂದು ಅವರು ತಿಳಿಸಿದ್ದಾರೆ.