ಬೆಂಗಳೂರು | ಇವಿ ರ್ಯಾಲಿಗೆ ಸಚಿವ ಸುನೀಲ್ ಕುಮಾರ್ ಚಾಲನೆ
ಬೆಂಗಳೂರು, ಜು.2: ಒಂದು ವಾರಗಳ ಇವಿ ಅಭಿಯಾನದ ಭಾಗವಾಗಿ ಬೆಸ್ಕಾಂ ಆಯೋಜಿಸಿದ್ದ ಇವಿ ರ್ಯಾಲಿಗೆ ಶನಿವಾರ ಬೆಳಗ್ಗೆ ಇಂಧನ ಸಚಿವ ವಿ.ಸುನೀಲ್ ಕುಮಾರ್ ಚಾಲನೆ ನೀಡಿದರು.
ವಿಧಾನಸೌಧದಿಂದ ಅರಮನೆ ಮೈದಾನದ ಚಾಮರ ವಜ್ರ ಸಭಾಂಗಣದವರೆಗೆ ಇಲೆಕ್ಟ್ರಿಕ್ ದ್ವಿಚಕ್ರವನ್ನು ತಾವೇ ಚಲಾಯಿಸುವ ಮೂಲಕ ಸಚಿವರು ರ್ಯಾಲಿಗೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಸಚಿವರು, ಹಸಿರು ಇಂಧನ ಬಳಕೆ ಕುರಿತು ಜನರಲ್ಲಿ ಅರಿವು ಮೂಡಿಸಲು ಬೆಸ್ಕಾಂ ಇವಿ ರ್ಯಾಲಿಯನ್ನು ಹಮ್ಮಿಕೊಂಡಿದೆ. ಇವಿ ಬಳಕೆಯನ್ನು ಮುಂದಿನ ದಿನಗಳಲ್ಲಿ ಹೆಚ್ಚಿಸಲು ರಾಜ್ಯ ಸರಕಾರ ನಿರಂತರ ಕಾರ್ಯಕ್ರಮಗಳನ್ನು ಹೊಮ್ಮಿಕೊಂಡಿದ್ದು, ಮುಂದಿನ ದಿನಗಳಲ್ಲಿ ಬೆಂಗಳೂರು ದೇಶದ ಇವಿ ರಾಜಧಾನಿಯಾಗಲಿದೆ ಎಂದರು.
ಇವಿ ಚಾರ್ಜಿಂಗ್ ಸ್ಟೇ಼ಷನ್ ನಿರ್ಮಾಣ, ಇವಿ ಉತ್ಪಾದನೆಗೆ ಬೆಂಬಲ, ಬ್ಯಾಟರಿ ತಯಾರಿಕೆ ಘಟಕ ನಿರ್ಮಾಣ ಮುಂತಾದ ಇವಿ ಸಂಬಂಧಿ ಯೋಜನೆಗಳಿಗೆ ರಾಜ್ಯ ಸರಕಾರ ಪ್ರೋತ್ಸಾಹ ನೀಡುತ್ತಿದೆ. ಇವಿ ಬಳಕೆ ದೊಡ್ಡ ಪ್ರಮಾಣದಲ್ಲಿ ಮಾಡುವುದೇ ನಮ್ಮ ಸರಕಾರದ ಮುಖ್ಯ ಆದ್ಯತೆ ಆಗಿದೆ ಎಂದು ಸಚಿವರು ಅಭಿಪ್ರಾಯಪಟ್ಟರು.
ಸುಮಾರು 300ಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳು ಇವಿ ರ್ಯಾಲಿಯಲ್ಲಿ ಭಾಗವಹಿಸಿದ್ದವು.
ಇಂಧನ ಇಲಾಖೆ ಒಂದು ವಾರದ ಇವಿ ಅಭಿಯಾನ ಆಯೋಜಿಸಿದ್ದು, ಇವಿ ಅಭಿಯಾನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಇಂಧನ ಸಚಿವ ಸುನೀಲ್ ಕುಮಾರ್ ಶುಕ್ರವಾರ ಉದ್ಘಾಟಿಸಿದರು.
ಬೆಸ್ಕಾಂ ಆಯೋಜಿಸಿರುವ ಮೂರು ದಿನಗಳ ಇವಿ ಎಕ್ಸ್ ಪೋಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇವಿ ಕೃಷಿ ಸಂಬಂಧಿ ಉಪಕರಣಗಳು ಮತ್ತು ಮಿನಿ ಟ್ರಾಕ್ಟರ್ ಗಳು ಮಳಿಗೆಯಲ್ಲಿ ಪ್ರದರ್ಶನಕ್ಕಿಡಲಾಗಿದೆ.