ಬೆಂಗಳೂರು | ದಾಳಿ ನಡೆಸಿ ಸುಲಿಗೆ ಮಾಡಿದ ಆರೋಪ: ಪಿಎಸ್ಸೈ ಸೇರಿ ಐವರು ಪೊಲೀಸರ ಅಮಾನತು
ಬೆಂಗಳೂರು, ಅ.8: ಕ್ರಿಕೆಟ್ ಬೆಟ್ಟಿಂಗ್ ಹೆಸರಿನಲ್ಲಿ ದಾಳಿ ನಡೆಸಿ ಸುಲಿಗೆ ಮಾಡಿದ ಆರೋಪದಡಿ ಸದಾಶಿವನಗರ ಠಾಣೆಯ ಪಿಎಸ್ಸೈ ಸೇರಿ ಐವರು ಪೊಲೀಸರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಸದಾಶಿವನಗರ ಪಿಎಸ್ಸೈ ಮೋಹನ್ ಬಸವರಾಜು, ಎಸ್.ಬಿ., ಪೇದೆಗಳಾದ ಶಿವಕುಮಾರ್, ಪರಶುರಾಮ್, ನಾಗರಾಜ್ ಸೇರಿದಂತೆ ಐವರನ್ನು ಅಮಾನತುಗೊಳಿಸಲಾಗಿದೆ.
ಪೊಲೀಸರ ವಿರುದ್ಧ ಆರೋಪ ಕೇಳಿಬಂದಿತ್ತು. ಪ್ರಾಥಮಿಕ ಮಾಹಿತಿ ಆಧರಿಸಿ ಅಮಾನತುಮಾಡಲಾಗಿದೆ. ಇಲಾಖೆ ವಿಚಾರಣೆ ನಡೆಯುತ್ತಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ಮಾಹಿತಿ ನೀಡಿದ್ದಾರೆ.
ತಮ್ಮದಲ್ಲದ ವ್ಯಾಪ್ತಿಯಾದ ಸಹಕಾರ ನಗರದಲ್ಲಿ ಬುಕ್ಕಿಗಳೆಂದು ಉದ್ಯಮಿ ಯೋಗೇಶ್ ಎಂಬುವವರನ್ನು ಬೆದರಿಸಿ ಶಿವಕುಮಾರ್ 3 ಲಕ್ಷ ಹಣ ಪಡೆದಿದ್ದರು. ಈ ವಿಚಾರವನ್ನು ಯೋಗೇಶ್ ಈಶಾನ್ಯ ವಿಭಾಗದ ಡಿಸಿಪಿ ಅನೂಪ್ ಶೆಟ್ಟಿಗೆ ಲಿಖಿತ ದೂರು ನೀಡಿದ್ದರು ಎನ್ನಲಾಗಿದೆ.
ಈ ದೂರಿನ ತನಿಖೆ ನಡೆಸಿದ ಯಲಹಂಕ ಎಸಿಪಿ ವರದಿ ನೀಡಿದ್ದು, ವರದಿ ಆಧಾರದ ಮೇಲೆ ಐವರನ್ನ ಅಮಾನತು ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.