ಮಹಾದಾಯಿ ಹೋರಾಟಗಾರರ ಬಿಡುಗಡೆ
ಬೆಂಗಳೂರು/ಬಳ್ಳಾರಿ, ಆ.13: ಮಹಾದಾಯಿ ನ್ಯಾಯಾಧೀಕರಣ ತೀರ್ಪು ವಿರೋಧಿಸಿ ಪ್ರತಿಭಟನೆ ನಡೆಸಿ ಬಂಧಿಸಲ್ಪಟ್ಟಿದ್ದ ನೂರಾರು ರೈತರು, ಹೋರಾಟಗಾರರನ್ನು ಬಳ್ಳಾರಿ ಜಿಲ್ಲಾ ಕೇಂದ್ರ ಕಾರಾಗೃಹದಿಂದ ಶನಿವಾರ ಬಿಡುಗಡೆ ಮಾಡಲಾಗಿದೆ.
ಜೈಲಿನಿಂದ ಬಿಡುಗಡೆಯಾದ ಬಳಿಕ ಮಾತನಾಡಿದ ಮಹಾದಾಯಿ ಹೋರಾಟ ಸಮಿತಿಯ ಮುಖಂಡ ಲೋಕನಾಥ್ ಹೆಬಸೂರು, ಜೈಲಿನಿಂದ ಬಿಡುಗಡೆ ಯಾಗಿರುವುದು ನಿರಾಶೆ ತಂದಿದೆ. ನಾವು ಬಂಧನದಲ್ಲಿಯೆ ಇರಲು ಬಯಸಿದ್ದೆವು ಎಂದರು.
ನಾವು ಜೈಲಿನಲ್ಲಿ ಇರುವುದರಿಂದಾದರೂ ಮಹಾದಾಯಿ ಕುಡಿಯುವ ನೀರಿನ ಸಮಸ್ಯೆ ಬಗೆ ಹರಿಯಬಹುದು ಎಂದು ಭಾವಿಸಿದ್ದೆವು. ನಮ್ಮ ಜೊತೆ ಬಹಳಷ್ಟು ಮಂದಿ ಅಮಾಯಕರನ್ನು ಬಂಧಿಸಲಾಗಿತ್ತು. ಅಂತಹವರು ಜೈಲಿನಿಂದ ಬಿಡುಗಡೆ ಆಗಲೇಬೇಕಿತ್ತು ಎಂದು ಲೋಕನಾಥ್ ತಿಳಿಸಿದರು.
ಹೋರಾಟದ ಮುಂಚೂಣಿಯಲ್ಲಿದ್ದ ಕಾರಣ ನನ್ನ ಕುಟುಂಬವನ್ನು ಗುರಿಯನ್ನಾಗಿಸಿ ನನ್ನ ಮಗನನ್ನು ಬಂಧಿಸಲಾಗಿತ್ತು. ಆತನ ಬಂಧನದಿಂದ ನನಗೇನು ಬೇಸರವಾಗಿಲ್ಲ. ಆತ ಯುಪಿಎಸ್ಸಿ ಪರೀಕ್ಷೆಯನ್ನು ತೆಗೆದುಕೊಳ್ಳಬೇಕಿತ್ತು. ಈ ಬಾರಿ ಅಲ್ಲದಿದ್ದರೂ ಮುಂದಿನ ವರ್ಷ ಆತ ಪರೀಕ್ಷೆ ಬರೆಯಬಹುದೆಂದು ಸುಮ್ಮನಿದ್ದೆ ಎಂದು ಅವರು ಹೇಳಿದರು.
ಯುಪಿಎಸ್ಸಿ ಪರೀಕ್ಷಾರ್ಥಿ ಹರಿಕೃಷ್ಣ ಹೆಬಸೂರು ಮಾತನಾಡಿ, ಜೈಲಿನಿಂದ ಬಿಡುಗಡೆ ಯಾಗುತ್ತಿರುವುದು ಸಂತಸ ತಂದಿದೆ. ಆದರೆ, ಇದು ರೈತರ ಸಮಸ್ಯೆಗೆ ಪರಿಹಾರವಲ್ಲ. ಮಹಾದಾಯಿ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಎಲ್ಲ ಪಕ್ಷಗಳ ನಾಯಕರು ಪ್ರಯತ್ನಿಸಬೇಕು. ನಾನು ಒಬ್ಬ ರೈತನ ಮಗನಾಗಿದ್ದು, ವಿದ್ಯಾಭ್ಯಾಸ ದೊಂದಿಗೆ ಮಹಾದಾಯಿ ಹೋರಾಟವನ್ನು ಬೆಂಬಲಿಸುತ್ತೇನೆ ಎಂದರು.
ಧಾರವಾಡ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ವಿ.ಡಿ.ಕಾಮರೆಡ್ಡಿ ಮಾತನಾಡಿ, ಮಹಾದಾಯಿ ಹೋರಾಟದಲ್ಲಿ ಪಾಲ್ಗೊಂಡಿದ್ದ ರೈತರಿಗೆ ನ್ಯಾಯಾಲಯವು ಷರತ್ತುಬದ್ಧ ಜಾಮೀನು ನೀಡಿದೆ. ಷರತ್ತುಗಳನ್ನು ವಿಧಿಸುವುದು ಸಾಮಾನ್ಯವಾದದ್ದು ಎಂದರು.
ನ್ಯಾಯಾಂಗ ಪ್ರಕ್ರಿಯೆಗೆ ವಿರುದ್ಧವಾಗಿ ಹೇಳಿಕೆಗಳನ್ನು ನೀಡಿದರೆ ನ್ಯಾಯಾಲಯವು ಜಾಮೀನು ರದ್ದುಪಡಿಸುವ ಸಾಧ್ಯತೆಗಳು ಇರುತ್ತವೆ. ಆದುದರಿಂದ, ರೈತರು ಈ ಬಗ್ಗೆ ತಮ್ಮ ಅನಿಸಿಕೆಗಳನ್ನು ಬಹಿರಂಗವಾಗಿ ವ್ಯಕ್ತಪಡಿಸಬಾರದು ಎಂದು ಕಾಮರೆಡ್ಡಿ ಸಲಹೆ ನೀಡಿದರು.
ವಕೀಲ ಪಿ.ಎಫ್.ಮೆಣಸಿನಕಾಯಿ ಮಾತನಾಡಿ, ಮಹಾದಾಯಿ ಹೋರಾಟಗಾರರನ್ನು ಬಿಡುಗಡೆಗೊಳಿಸುವ ಪ್ರಕ್ರಿಯೆ ತಡವಾಗಲು ರಾಜ್ಯ ಸರಕಾರ ಅಥವಾ ನ್ಯಾಯಾಲಯ ಕಾರಣವಲ್ಲ. ಹೋರಾಟದ ಸಂದರ್ಭದಲ್ಲಿ ನವಲಗುಂದ ನ್ಯಾಯಾಲಯದ ಕಚೇರಿಯಲ್ಲಿ ದಾಖಲೆಗಳು, ಕಂಪ್ಯೂಟರ್ ಸೇರಿದಂತೆ ಇನ್ನಿತರ ಸಾಮಗ್ರಿಗಳು ಬೆಂಕಿಗಾಹುತಿಯಾದವು. ಇದರಿಂದಾಗಿ ಜಾಮೀನು ಪ್ರಕ್ರಿಯೆ ವಿಳಂಬವಾಯಿತು ಎಂದರು.
ಬಳ್ಳಾರಿ ಕೇಂದ್ರ ಕಾರಾಗೃಹದಿಂದ ಕನಕದುರ್ಗಮ್ಮ ದೇವಸ್ಥಾನದವರೆಗೆ ಕಾಲ್ನಡಿಗೆ ಮೂಲಕ ತೆರಳಿದ ರೈತರು ಹಾಗೂ ಹೋರಾಟಗಾರರು, ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮೂರು ಸರಕಾರಿ ಬಸ್ಸುಗಳ ಮೂಲಕ ತಮ್ಮ ತಮ್ಮ ಗ್ರಾಮಗಳತ್ತ ತೆರಳಿದರು. ಇದಕ್ಕೂ ಮುನ್ನ ಶಾಸಕ ಎನ್.ಎಚ್.ಕೋನರೆಡ್ಡಿ, ಬಿ.ಡಿ.ಪಾಟೀಲ್ ಸೇರಿದಂತೆ ಇನ್ನಿತರರು ಕಾರಾಗೃಹಕ್ಕೆ ಭೇಟಿ ನೀಡಿ ಬಂಧಮುಕ್ತ ರೈತರೊಂದಿಗೆ ಚರ್ಚೆ ನಡೆಸಿದರು.