ದೀಪಾವಳಿ ಹಬ್ಬಕ್ಕೆ ಪತ್ರಕರ್ತರಿಗೆ ನಗದು ಗಿಫ್ಟ್ ಆರೋಪ: ಲೋಕಾಯುಕ್ತಕ್ಕೆ ದೃಢ ಸಾಕ್ಷ್ಯಾಧಾರ ಸಲ್ಲಿಕೆ?
ಬೆಂಗಳೂರು, ನ.7: ದೀಪಾವಳಿ ಹಬ್ಬದ ದಿನದಂದು ಮುಖ್ಯಮಂತ್ರಿ ಕಚೇರಿಯಿಂದ ಹಿರಿಯ ಪತ್ರಕರ್ತರಿಗೆ ಸಿಹಿ ತಿಂಡಿಗಳ ಜತೆಗೆ, ನಗದು ಉಡುಗೊರೆ ನೀಡಿರುವ ಆರೋಪ ಪ್ರಕರಣ ಸಂಬಂಧ ಲೋಕಾಯುಕ್ತಕ್ಕೆ ಹಲವು ಸಾಕ್ಷ್ಯಾಧಾರಗಳನ್ನು ಕಲೆಹಾಕಿ ಸಲ್ಲಿಕೆ ಮಾಡಲಾಗುತ್ತಿದೆ.
ಜನಾಧಿಕಾರ ಸಂಘರ್ಷ ಪರಿಷತ್, ನೈಜ್ಯ ಹೋರಾಟಗಾರರ ವೇದಿಕೆ, ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ಹಾಗೂ ಮಾಹಿತಿ ಹಕ್ಕು ಅಧ್ಯಯನ ಕೇಂದ್ರದ ಪ್ರಮುಖ ಸಂಚಾಲಕರು, ನಾಳೆ(ನ.9) ಪ್ರಕರಣಕ್ಕೆ ಸಂಬಂಧಿಸಿದಂತೆ ನೇರವಾಗಿ ಲೋಕಾಯುಕ್ತ ಎಡಿಜಿಪಿ ಅವರಿಗೆ ಸಾಕ್ಷ್ಯಾಧಾರಗಳನ್ನು ಸಲ್ಲಿಸಲಿದ್ದಾರೆ.
ಪ್ರಮುಖವಾಗಿ ಮುಖ್ಯಮಂತ್ರಿ ಕಚೇರಿ ಸಿಬ್ಬಂದಿನಗರ ಕುಮಾರಸ್ವಾಮಿ ಲೇಔಟ್ನಲ್ಲಿರುವ ಹಿರಿಯ ಪತ್ರಕರ್ತರ ಮನೆಗೆ ತೆರಳಿ ನಗದು ಇರುವ ಪೆಟ್ಟಿಗೆ ಹಂಚುತ್ತಿರುವ ವೀಡಿಯೊ ಸಂಗ್ರಹಿಸಿದ್ದಾರೆ. ಅದೇ ರೀತಿ, ಮುಖ್ಯಮಂತ್ರಿ ಕಚೇರಿಯಿಂದ ಸರಕಾರಿ ವಾಹನ ದುರ್ಬಳಕೆ ಮಾಡಿಕೊಂಡಿರುವ ಕುರಿತು ಪತ್ರವೊಂದನ್ನು ಶೇಖರಣೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಎಫ್ಐಆರ್ ಗೆ ಪಟ್ಟು: ಅಕ್ರಮ ಹಣ ಹಂಚಿಕೆಯಲ್ಲಿ ನೇರವಾಗಿ ಮುಖ್ಯಮಂತ್ರಿ ಕಚೇರಿ ಸಿಬ್ಬಂದಿಯೇ ಪಾಲ್ಗೊಂಡಿದ್ದಾರೆ. ಈ ಸಂಬಂಧ ಸಾಕ್ಷ್ಯಧಾರಗಳು ನಮ್ಮಲ್ಲಿವೆ. ಇದನ್ನು ಗಂಭೀರವಾಗಿ ಪರಿಗಣಿಸಿ ಎಫ್ಐಆರ್ ದಾಖಲಿಸಬೇಕು. ಇಲ್ಲದಿದ್ದರೆ, ಕಾನೂನು ಹೋರಾಟ ನಡೆಸಲಾಗುವುದು ಎಂದು ಸಾಮಾಜಿಕ ಕಾರ್ಯಕರ್ತ ಆದರ್ಶ ಅಯ್ಯರ್ ‘ವಾರ್ತಾಭಾರತಿ’ ಪತ್ರಿಕೆಗೆ ಮಾಹಿತಿ ನೀಡಿದರು.
ದೂರು ನೀಡಿದ್ದ ಪರಿಷತ್: ಆಯ್ದ ಪತ್ರಕರ್ತರಿಗೆ, ಪತ್ರಿಕಾ ಸಂಸ್ಥೆಗಳಿಗೆ ದೀಪಾವಳಿ ಪ್ರಯುಕ್ತ ಸಿಹಿತಿಂಡಿ ನೀಡುವುದರ ಜೊತೆ ಲಕ್ಷಾಂತರ ರೂಪಾಯಿ ಹಣ ನೀಡಿದ ಆರೋಪದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮುಖ್ಯಮಂತ್ರಿಗಳ ಮಾಧ್ಯಮ ಸಂಯೋಜಕ ಶಂಕರ್ ಪಾಗೋಜಿ ವಿರುದ್ಧ ಲೋಕಾಯುಕ್ತ ಮತ್ತು ಲೋಕಾಯುಕ್ತ ಪೊಲೀಸ್ ವಿಭಾಗದ ಎಡಿಜಿಪಿಯವರಿಗೆ ಜನಾಧಿಕಾರ ಸಂಘರ್ಷ ಪರಿಷತ್ ಇತ್ತೀಚಿಗೆ ದೂರು ನೀಡಿತ್ತು.
ಅಷ್ಟೇ ಅಲ್ಲದೆ, ಮುಖ್ಯಮಂತ್ರಿ ಮತ್ತು ಮಾಧ್ಯಮ ಸಂಯೋಜಕರ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ 2018ರ ತಿದ್ದುಪಡಿ ಅಧಿನಿಯಮದ ಅನ್ವಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯ ಮಾಡಿತ್ತು.