ವಿಧಾನಸೌಧದಲ್ಲಿ ಕ್ರಿಮಿನಲ್, ಅಪರಾಧಿಗಳು ನೆಲೆಸಿದ್ದಾರೆ: ನ್ಯಾ.ನಾಗಮೋಹನ್ದಾಸ್ ಬೇಸರ
ಶಾಂತವೇರಿ ಗೋಪಾಲಗೌಡ ವಿಚಾರ ಸಂಕಿರಣ
ಬೆಂಗಳೂರು, ಡಿ. 4: ರಾಜಕೀಯ ನೈತಿಕತೆ ಮತ್ತು ಪ್ರಾಮಾಣಿಕತೆಯನ್ನು ಸಮಾಜವಾದಿ ಚಿಂತಕ ಶಾಂತವೇರಿ ಗೋಪಾಲಗೌಡರಿಂದ ಮಾತ್ರ ಅರಿತುಕೊಳ್ಳಲು ಸಾಧ್ಯ. ಪ್ರಸ್ತುತ ರಾಜಕಾರಣ ಲಜ್ಜೆಗೇಡಿತನದಿಂದ ಕೂಡಿದೆ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಬೇಸರ ವ್ಯಕ್ತಪಡಿಸಿದ್ದಾರೆ.
ರವಿವಾರ ಗಾಂಧಿಭವನದಲ್ಲಿ ನಡೆದ ‘ಶತಮಾನದ ಶಾಂತವೇರಿ ವಿಚಾರ ಸಂಕಿರಣ ಮತ್ತು ನೆನಪು’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಚನಾತ್ಮಕ ಪ್ರಜಾಪ್ರಭುತ್ವ, ಸಂವಿಧಾನದ ಆಶಯಗಳನ್ನು ರೂಪಿಸುವ ಚರ್ಚೆಗಳನ್ನು ಮಾಡಿದ ಗೋಪಾಲಗೌಡರಂತಹ ಮೇರು ವ್ಯಕ್ತಿತ್ವ ಇದ್ದಂತಹ ವಿಧಾನಸೌಧದಲ್ಲಿ ಕ್ರಿಮಿನಲ್, ಅಪರಾಧಿಗಳು ನೆಲೆಸಿದ್ದಾರೆ. ಮೂರು ಬಾರಿ ಶಾಸಕರಾಗಿ ವಿಧಾನಸಭೆ ಪ್ರವೇಶ ಮಾಡಿದ ಗೋಪಾಲಗೌಡರು ನಾಡಿನ, ಸಮಾಜದ, ಭಾಷಾ, ಬಡವರ ಪ್ರತಿನಿಧಿಯಾಗಿದ್ದರು. ಶಾಸಕಾಂಗ ಪರಿಣಾಮಕಾರಿಯಾಗಿ ಕೆಲಸ ಮಾಡಲು ಪ್ರೇರೇಪಿಸಿದ ಅವರಂತಹ ಅಪರೂಪದ ರಾಜಕಾರಣಿಗಳು ಪ್ರಸ್ತುತಕ್ಕೆ ಅನಿವಾರ್ಯ ಎಂದು ತಿಳಿಸಿದರು.
ಸಂಸತ್ ಮತ್ತು ವಿಧಾನಸೌಧದಲ್ಲಿ ಅತ್ಯಾಚಾರ, ಶೋಷಣೆ, ನಿರುದ್ಯೋಗ, ರೈತರ ಆತ್ಮಹತ್ಯೆಗಳಂತಹ ಗಂಭೀರ ವಿಷಯಗಳ ಚರ್ಚೆಗಳನ್ನು ನಿರೀಕ್ಷಿಸಲು ಸಾಧ್ಯವಾಗುತ್ತಿಲ್ಲ. ಕೂಗಾಟ, ಕಿರುಚಾಟಗಳಿಂದ ಕೂಡಿದ ಸದನಗಳಿಂದ ಚರ್ಚೆಯಿಲ್ಲದ ನೂರಾರು ವಿಧೇಯಕ(ಬಿಲ್)ಗಳು, ಸಾವಿರಾರು ಕೋಟಿ ರೂ.ಗಳ ಬಂಡವಾಳಶಾಹಿ ಅಭಿವೃದ್ದಿಯ ಯೋಜನೆಗಳು ಅನುಷ್ಠಾನಗೊಳ್ಳುತ್ತವೆ. ಇವತ್ತಿನ ರಾಜಕಾರಣದಲ್ಲಿ ಸಂಸ್ಕøತಿಯನ್ನು ಹುಡುಕುವ ಪ್ರಯತ್ನಕ್ಕೆ ಹೋಗಬಾರದು. ‘ಜಾತ್ಯತೀತರು ಒಬ್ಬನಿಗೆ ಹುಟ್ಟಿಲ್ಲ. ಅವನ ನಾಲಿಗೆ ಸೀಳಿ, ಚೋರ್ ಹೈ, ದಮ್ಮು, ತಾಕತ್ತು’ ಈ ರೀತಿಯ ಪದಬಳಕೆಯಿಂದ ರಾಜಕಾರಣ ಕಲುಷಿತಗೊಂಡಿದೆ ಎಂದು ವಿಷಾದಿಸಿದರು.
ಪ್ರಗತಿಪರ ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್ ಮಾತನಾಡಿ, ಹೊಸ ತಲೆಮಾರಿನ ಯುವಜನತೆಗೆ ಸಮಪಾಲು ಚಿಂತನೆ, ಮಾನವೀಯ ಮೌಲ್ಯಗಳ ಮುಖಾಂತರ ಚೈತನ್ಯವನ್ನು ಹುಟ್ಟುಹಾಕಿದ್ದ ಶಾಂತವೇರಿಯವರು ರಾಜಕಾರಣದಲ್ಲಿ ಒಂದು ದಂತಕತೆ. ಆದರೆ ಹಣಬಲ, ಜಾತಿಬಲಗಳಿಂದ ಕೂಡಿದ ಈಗಿನ ರಾಜಕಾರಣದಲ್ಲಿ ಸಾಮಾನ್ಯರ ಅಭಿವೃದ್ಧಿಯನ್ನು ನಿರೀಕ್ಷಿಸುವುದೇ ಒಂದು ಅಪರಾಧವಾಗಿದೆ. ಇಂದು ರಾಜಕೀಯ ವಿರೋಧಿಗಳನ್ನು ಟೀಕಿಸುವ ಭರದಲ್ಲಿ ಅವಾಚ್ಯ, ಅಸಂಬದ್ಧ ಪದಗಳಿಂದ ಪ್ರತಿಸ್ಪರ್ಧಿಯನ್ನು ಹೀಯಾಳಿಸಿ, ಅವಮಾನ ಮಾಡಲಾಗುತ್ತದೆ. ಆದರೆ ಗೋಪಾಲಗೌಡರ ಕಾಲಘಟ್ಟದಲ್ಲಿ ರಾಜಕೀಯ ವಿರೋಧಿಗಳನ್ನೂ ಅತ್ಯಂತ ಗೌರವಯುತವಾಗಿ ಟೀಕಿಸಲಾಗುತ್ತಿತ್ತು. ರಾಜಕೀಯ ಜೀವನದುದ್ದಕ್ಕೂ ಪ್ರಾಮಾಣಿಕ ದಕ್ಷತೆಯನ್ನು ಕಾಪಾಡಿಕೊಂಡ ಗೋಪಾಲಗೌಡರ ಜೀವನ ಶೈಲಿಯನ್ನು ಇಂದಿನ ರಾಜಕಾರಣಿಗಳು ಅನುಸರಿಸಬೇಕಾಗಿದೆ ಎಂದರು.
ಹಿರಿಯ ಲೇಖಕ ಪ್ರೊ.ಕಾಳೇಗೌಡ ನಾಗವಾರ ಮಾತನಾಡಿ, ಸಮಾನತೆಯ ತತ್ವಗಳಿಂದ ಯಾರೂ ಬದುಕುಳಿಯುತ್ತಾರೋ ಅವರು ಮಾತ್ರ ಸಮಾಜದಲ್ಲಿ ಚಿರಸ್ಥಾಯಿಯಾಗಲು ಸಾಧ್ಯ. ಕಾರ್ಲ್ಮಾಕ್ರ್ಸ್, ಲೋಹಿಯಾ, ಗಾಂಧಿಯವರ ಪ್ರಭಾವಕ್ಕೆ ಒಳಗಾಗಿದ್ದ ಶಾಂತವೇರಿ ಗೋಪಾಲಗೌಡರು ಸಮಾಜದ ಅಸಮಾನತೆಗಳ ವಿರುದ್ಧ ಅವಿರತ ಹೋರಾಟ ಮಾಡಿದ್ದಾರೆ ಎಂದು ಶಾಂತವೇರಿಯವರ ರಾಜಕೀಯ ಹಾಗೂ ಹೋರಾಟದ ಬದುಕನ್ನು ಮೆಲುಕು ಹಾಕಿದರು.
ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಎಚ್.ಎಲ್.ಪಷ್ಪಾ ಮಾತನಾಡಿ, ಸ್ವಾತಂತ್ರ್ಯದ ನಂತರವೂ ಹೊಲದಲ್ಲಿನ ಕೂಳೆಗಳಿದ್ದ ಹಾಗೆ ಜಾತೀಯತೆ, ಶೋಷಣೆ, ದಬ್ಬಾಳಿಕೆಗಳೆಲ್ಲವೂ ಇತ್ತು. ನವ್ಯ ಕಾಲಘಟ್ಟದ ಚಳುವಳಿಗಾರರು ಮಾನವೀಯತೆ, ಸಮಾನತೆಗಾಗಿ ಸಾಕಷ್ಟು ಹೋರಾಟ ನಡೆಸಿದ್ದಾರೆ. ಗೋಪಾಲಗೌಡರು ಕ್ವಿಟ್ ಇಂಡಿಯಾ ಚಳುವಳಿ, ಕಾಗೋಡು ಚಳುವಳಿ, ಕನ್ನಡಪರ ಹೋರಾಟ, ಕರ್ನಾಟಕ ಏಕೀಕರಣ ಚಳುವಳಿ ಹೀಗೆ ಸಮಾಜವಾದದ ಹಲವು ಹೋರಾಟಗಳಲ್ಲಿ ಭಾಗಿಯಾಗಿದ್ದರು. ಆಡಳಿತ ಭಾಷೆಯಾಗಿ ಕನ್ನಡವನ್ನೇ ಬಳಸಬೇಕೆನ್ನುವುದು ಅವರ ವಾದವಾಗಿತ್ತು. ಅಲ್ಲದೆ ನ್ಯಾಯಾಲಯದಲ್ಲಿ ತೀರ್ಪನ್ನು ಇಂಗ್ಲಿಷ್ ಭಾಷೆಯಲ್ಲಿ ಬರೆಯುವುದನ್ನು ಖಂಡಿಸಿ ಕನ್ನಡದಲ್ಲಿ ತೀರ್ಪು ಬರೆದು ನೀಡಬೇಕೆಂದು ಹೋರಾಡಿದ್ದರು. ವಿಚಾರಗಳನ್ನು ನಂಬಿ ವಿಚಾರಗೊಂದಿಗೆ ಬದುಕಿದ್ದ ಗೋಪಾಲಗೌಡರನ್ನು ಮತ್ತೊಬ್ಬರಲ್ಲಿ ಕಾಣಲು ಅಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ರಾಮಮನೋಹರ ಶಾಂತವೇರಿ, ಲೇಖಕ ಡಾ.ಶ್ರೀಪತಿ ಹಳಗುಂದ, ರಾಜಶೇಖರ ಕಿಗ್ಗ ಉಪಸ್ಥಿತರಿದ್ದರು.