ಪೊಲೀಸ್ ಗುಂಟೇಟಿಗೆ ಬಲಿಯಾದ ಉಮೇಶ್ ಕುಟುಂಬಕ್ಕೆ ಪರಿಹಾರ ಘೋಷಣೆ
ಬೆಂಗಳೂರು, ಸೆ.12: ಕಾವೇರಿ ವಿವಾದ ಕುರಿತಂತೆ ಹೋರಾಟ ನಡೆಸುತ್ತಿದ್ದ ಸಂದರ್ಭ ಪೊಲೀಸರು ಹಾರಿಸಿದ್ದ ಗುಂಡಿಗೆ ಬಲಿಯಾಗಿದ್ದ ತುಮಕೂರಿನ ಸೀಗೇನಹಳ್ಳಿಯ ಯುವಕ ಉಮೇಶ್ ಕುಟುಂಬಕ್ಕೆ ಸರಕಾರ 5 ಲಕ್ಷ ರೂ. ಪರಿಹಾರ ಘೋಷಿಸಿದೆ.
ಪೊಲೀಸ್ ಇಲಾಖೆಗೆ ಸೇರಿದ ಹೊಯ್ಸಳ ವಾಹನಕ್ಕೆ ಬೆಂಕಿ ಹಚ್ಚಲಾಗಿದೆ ಎಂದು ಆರೋಪಿಸಿ ಹೆಗ್ಗನಹಳ್ಳಿಯ ಮೋಹನ್ ಥಿಯೇಟರ್ ಸಮೀಪ ಗಸ್ತು ನಿರತವಾಗಿದ್ದ ಪೊಲೀಸ್ ಪಡೆ ಗುಂಡು ಹಾರಿಸಿತ್ತು. ಗುಂಡೇಟು ತಗಲಿ ಇಬ್ಬರು ಯುವಕರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ತೀವ್ರ ಸ್ವರೂಪದಲ್ಲಿ ಗಾಯಗೊಂಡಿದ್ದ ಉಮೇಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.
ಮೃತ ಉಮೇಶ್ ರ ಪತ್ನಿಗೆ ಗುತ್ತಿಗೆ ಆಧಾರದಲ್ಲಿ ಸರಕಾರಿ ಉದ್ಯೋಗ ನೀಡಲಾಗುವುದು. ಅವರ ಮಕ್ಕಳಿಗೆ ಪದವಿವರೆಗಿನ ಶಿಕ್ಷಣದ ವೆಚ್ಚವನ್ನು ಸರಕಾರ ಭರಿಸಲಿದೆ ಎಂದು ಜಿಲ್ಲಾಧಿಕಾರಿ ವಿ. ಶಂಕರ್ ತಿಳಿಸಿದ್ದಾರೆ.
ಸರಕಾರದ ಜೊತೆಗೆ ಚಿತ್ರ ನಿರ್ಮಾಪಕ ಸಾಜಿದ್ ಖುರೇಷಿ 2 ಲಕ್ಷ ರೂ., ಕರವೇ ಅಧ್ಯಕ್ಷ ನಾರಾಯಣ ಗೌಡ 50 ಸಾವಿರ ರೂ. ಪರಿಹಾರ ಘೋಷಿಸಿದ್ದಾರೆ.