ಬಿಎಂಟಿಸಿ ಸಿಬ್ಬಂದಿ ಮೇಲೆ ಹಲ್ಲೆ ಆರೋಪ: ಅಧಿಕಾರಿ ವಿರುದ್ಧ ಕ್ರಮಕ್ಕೆ ನೌಕರರ ಆಗ್ರಹ
ಬೆಂಗಳೂರು, ಫೆ. 7: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ)ಯ ರಾಜರಾಜೇಶ್ವರಿ ನಗರ ಘಟಕ 21ರಲ್ಲಿ ಕರ್ತವ್ಯನಿತರ ತಾಂತ್ರಿಕ ಸಹಾಯಕ ಶಿವಪ್ರಸಾದ್ ಮೇಲೆ ಅಲ್ಲಿನ ಅಧಿಕಾರಿ ಮಂಜುನಾಥ ಹಲ್ಲೆ ನಡೆಸಿದ್ದು, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಬಿಎಂಟಿಸಿ ಕಾರ್ಮಿಕ ಸಂಘದ ಅಧ್ಯಕ್ಷ ಎಚ್.ಡಿ. ರೇವಪ್ಪ ಹಾಗೂ ಪ್ರಧಾನ ಕಾರ್ಯದರ್ಶಿ ಆನಂದ್ ಆಗ್ರಹಿಸಿದ್ದಾರೆ.
ಜ.27ರಂದು ಸಾಮಾನ್ಯ (ಬೆಳಗ್ಗೆ 8ರಿಂದ 5) ಪಾಳಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ತಾಂತ್ರಿಕ ಸಹಾಯಕ ಶಿವಪ್ರಸಾದ್ ಮೇಲೆ ಅದೇ ಘಟಕಗಳಲ್ಲಿ ಪಾರುಪತ್ತೆದಾರ ಮಂಜುನಾಥ್ ಅದೇ ದಿನ ಸಂಜೆ 4ಗಂಟೆಯ ಸುಮಾರಿಗೆ ಹಲ್ಲೆ ನಡೆಸಿದ್ದು, ಇದರಿಂದಾಗಿ ಶಿವಪ್ರಸಾದ್ ಅವರ ಬಲಗಣ್ಣಿಗೆ ತೀವ್ರ ಸ್ವರೂಪದ ಗಾಯವಾಗಿದೆ. ಆ ಹಿನ್ನೆಲೆಯಲ್ಲಿ ಶಿವಪ್ರಸಾದ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದಿದ್ದಾರೆ ಎಂದು ತಿಳಿಸಲಾಗಿದೆ.
ಕ್ಷುಲ್ಲಕ ಕಾರಣಕ್ಕೆ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ ಅಧಿಕಾರಿ ಮಂಜುನಾಥ್ ವಿರುದ್ಧ ಕೆಂಗೇರಿ ಠಾಣಾ ಪೊಲೀಸರಿಗೆ ದೂರು ನೀಡಿದ್ದರೂ, ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಆ ಹಿನ್ನೆಲೆಯಲ್ಲಿ ಘಟಕದ ಸಿಬ್ಬಂದಿ ಪ್ರತಿನಿತ್ಯ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.
ಕರ್ತವ್ಯನಿತರ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ ಅಧಿಕಾರಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಅಲ್ಲದೆ, ಅವರನ್ನು ಕೆಲಸದಿಂದ ವಜಾಗೊಳಿಸಬೇಕು.