ಹೊಟೇಲ್ಗಳಲ್ಲಿ ಗ್ರಾಹಕರಿಗೆ ಸೇವಾ ಶುಲ್ಕ ರದ್ದಿಗೆ ಕ್ರಮ : ಸಚಿವ ಯು.ಟಿ.ಖಾದರ್
ಬೆಂಗಳೂರು, ಎ. 25: ಹೊಟೇಲ್ಗಳಲ್ಲಿ ಗ್ರಾಹಕರಿಗೆ ಸೇವಾ ಶುಲ್ಕವನ್ನು ವಿಧಿಸದಂತೆ ಹೊಟೇಲ್ ಮಾಲಕರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಯು.ಟಿ.ಖಾದರ್ ಇಂದಿಲ್ಲಿ ತಿಳಿಸಿದ್ದಾರೆ.
ಮಂಗಳವಾರ ವಿಕಾಸಸೌಧದಲ್ಲಿನ ತನ್ನ ಕೊಠಡಿಯಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಮಂತ್ರಾಲಯವು ಕಳುಹಿಸಿರುವ ಆದೇಶದನ್ವಯ, ಈ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಕುರಿತು ಜಾಗೃತಿಯನ್ನು ಮೂಡಿಸಲಾಗುವುದು. ಆಹಾರವನ್ನು ಸಾರ್ವಜನಿಕರು ವ್ಯರ್ಥ ಮಾಡದಂತೆ ಕ್ರಮ ವಹಿಸಬೇಕು. ಮಿಕ್ಕ ಆಹಾರವನ್ನು ಸ್ವಯಂ ಸೇವಾ ಸಂಸ್ಥೆಗಳಿಗೆ ನೀಡಬೇಕು. ಈ ಹಿಂದೆ ಹೊಟೇಲ್ಗಳಲ್ಲಿ ಶೇ.6ರಿಂದ 8 ರಷ್ಟು ಸೇವಾ ಶುಲ್ಕವನ್ನು ವಿಧಿಸುತ್ತಿದ್ದರು. ಗ್ರಾಹಕರು ಹೊಟೇಲ್ಗಳಲ್ಲಿ ಸೇವಾ ಶುಲ್ಕ ಹೇರುವುದರ ವಿರುದ್ಧ ಗ್ರಾಹಕರು ನ್ಯಾಯಾಲಯದ ಮೊರೆ ಹೋಗಬಹುದು ಎಂದರು.
ಪುನರ್ ಬೆಳಕು: ಅನಿಲ ರಹಿತ ಪಡಿತರ ಚೀಟಿದಾರರಿಗೆ ಉಚಿತ ಅನಿಲ ಸಂಪರ್ಕ ಒದಗಿಸಲು ‘ಅನಿಲ ಭಾಗ್ಯ’ ಯೋಜನೆ ಹಾಗೂ ಗ್ರಾಮೀಣ ಪ್ರದೇಶದ ಅನಿಲ ಪಡಿತರ ಚೀಟಿದಾರರಿಗೆ ಆಯ್ಕೆ ಮೇರೆಗೆ ಸೀಮೆಎಣ್ಣೆ ಬದಲಿಗೆ ಎಲ್ಇಡಿ ಬಲ್ಬ್ಸೆಟ್ (ರೀಚಾರ್ಜೆಬಲ್) ಅನ್ನು ‘ಪುನರ್ ಬೆಳಕು ಯೋಜನೆ’ ಅನುಷ್ಠಾನ ಗೊಳಿಸಲಾಗುವುದು ಎಂದು ಅವರು ಹೇಳಿದರು.
ಉಜ್ವಲ ಯೋಜನೆಯಡಿ ಕೇಂದ್ರ ಸರಕಾರ ಆಯ್ಕೆಯಾದ ಫಲಾನುಭವಿಗಳಿಗೆ ಉಚಿತ ಅನಿಲ ಸಂಪರ್ಕ ನೀಡುತ್ತದೆ. ಇದಕ್ಕೆ ಪೂರಕವಾಗಿ ರಾಜ್ಯ ಸರಕಾರವು 1 ಸಾವಿರ ರೂ.ಬೆಲೆಯುಳ್ಳ ಎರಡು ಬರ್ನರ್ಗಳ ಗ್ಯಾಸ್ ಸ್ಟವ್ ನೀಡುತ್ತದೆ ಎಂದು ಹೇಳಿದರು.
ರಾಜ್ಯವನ್ನು ಶೇ.100ರಷ್ಟು ಎಲ್ಪಿಜಿ ಯುಕ್ತ ರಾಜ್ಯವನ್ನಾಗಿಸಲು ಕೇಂದ್ರದ ಉಜ್ವಲ ಯೋಜನೆಯ ವ್ಯಾಪ್ತಿಗೆ ಒಳಪಡದಿರುವ ಕುಟುಂಬಗಳಿಗೂ ರಾಜ್ಯ ಸರಕಾರದಿಂದ ಉಚಿತ ಅನಿಲ ಸಂಪರ್ಕ ಕಲ್ಪಿಸುವ ‘ಅನಿಲಭಾಗ್ಯ’ ಯೋಜನೆಯಡಿ ನೀಡಲು ಉದ್ದೇಶಿಸಿದೆ. ಗ್ರಾಮೀಣ ಭಾಗದ ಗ್ಯಾಸ್ ಸಂಪರ್ಕವಿರುವ ಗ್ರಾಹಕರಿಗೆ ಕಾರ್ಡ್ಗೆ 1ಲೀಟರ್ ಸೀಮೆಎಣ್ಣೆಯನ್ನು ನೀಡಲಾಗುವುದು ಎಂದರು.
‘ಅನಿಲ ಭಾಗ್ಯ’ ಯೋಜನೆಯಡಿ 5ಲಕ್ಷ ಬಡಕುಟುಂಬಗಳಿಗೆ ಉಚಿತವಾಗಿ ಅನಿಲ ಸಂಪರ್ಕಕ್ಕಾಗಿ ಪ್ರತಿ ಫಲಾನುಭವಿಗಳಿಗೆ 1,600ರೂ. ಸಹಾಯಧನ ವಿತರಣೆ ಹಾಗೂ ಅನಿಲ ಸೌಲಭ್ಯದೊಂದಿಗೆ ಗ್ರಾಮೀಣ ಪ್ರದೇಶದ ಪಡಿತರ ಚೀಟಿದಾರರಿಗೆ ತಮಗೆ ಹಂಚಿಕೆಯಾದ ಸೀಮೆಎಣ್ಣೆ ಅಥವಾ ಉಚಿತ ರೀಚಾರ್ಜೆಬಲ್ ಎಲ್ಇಡಿ ಸೆಟ್ಗಳನ್ನು ಆಯ್ಕೆ ಮಾಡುವ ಅವಕಾಶ ಕಲ್ಪಿಸಲಾಗಿದೆ ಎಂದರು. ಗೋಷ್ಠಿಯಲ್ಲಿ ಆಹಾರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ ಹಾಜರಿದ್ದರು.