ಭೀಕರ ಅಪಘಾತ: ತಲೆ ಮೇಲೆ ಲಾರಿ ಹರಿದು ಯುವತಿ ಸಾವು
ಬೆಂಗಳೂರು, ಜೂ.23: ಬೈಕ್ನಲ್ಲಿ ಸಂಚರಿಸುತ್ತಿದ್ದ ಟೆಕ್ಕಿ ಯುವತಿಯ ತಲೆ ಮೇಲೆ ಲಾರಿ ಹರಿದ ಪರಿಣಾಮ ಟೆಕ್ಕಿ ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ಇಲ್ಲಿನ ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ವೈಟ್ಫೀಲ್ಡ್ನ ಸಾಫ್ಟ್ವೇರ್ ಕಂಪೆನಿಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 26 ವರ್ಷದ ಕಾವ್ಯಶ್ರೀ ಮೃತ ಯುವತಿಯಾಗಿದ್ದು, ಗುಜರಾತಿನ ವಡೋದರ ಮೂಲದವರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆ ವಿವರ: ನಗರದ ಹೊಸೂರು ಮುಖ್ಯರಸ್ತೆಯ ಎಲೆಕ್ಟ್ರಾನಿಕ್ ಸಿಟಿ ಸಮೀಪದ ವೀರಸಂದ್ರ ಸಿಗ್ನಲ್ ಬಳಿ ಬೈಕ್ಗೆ ಲಾರಿ ಢಿಕ್ಕಿ ಹೊಡೆದ ಪರಿಣಾಮ, ನಿಯಂತ್ರಣ ತಪ್ಪಿ ಕಾವ್ಯಶ್ರೀ ಲಾರಿ ಚಕ್ರದ ಕೆಳಗೆ ಬಿದ್ದಿದ್ದಾರೆ. ಹೆಲ್ಮೆಟ್ ಧರಿಸಿದ್ದರೂ ಕೂಡ ಹೆಲ್ಮೆಟ್ ಸಮೇತ ತಲೆ ಛಿದ್ರ ಛಿದ್ರಗೊಂಡು ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಪ್ರಕರಣ ಸಂಬಂಧ ಲಾರಿ ಚಾಲಕನನ್ನು ವಶಕ್ಕೆ ಪಡೆದ ಸಂಚಾರಿ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Next Story