ಕೆಜಿಎಫ್: ಇದು 24 ಕ್ಯಾರೆಟ್ ಗೋಲ್ಡ್
ರೌಡಿಸಮ್ ಕತೆಯಲ್ಲಿ ಅದೆಷ್ಟೋ ಸಿನೆಮಾಗಳು ಬಂದು ಹೋಗಿವೆ. ಆದರೆ ಒಂದು ಪ್ರದೇಶವೇ ಹೇಗೆ ರೌಡಿಯನ್ನು ಬೆಳೆಸುತ್ತಾ ಹೋಗುತ್ತದೆ ಎನ್ನುವುದನ್ನು ಕೆಜಿಎಫ್ ಚಿತ್ರ ಆಕರ್ಷಕವಾಗಿ ತೋರಿಸಿದೆ. ಭೂಮಿಯ ಆಳದಿಂದ ಚಿನ್ನವನ್ನು ಹೊರತೆಗೆದಷ್ಟೇ ಕಷ್ಟದಲ್ಲಿ ಆ ತಾಯಿ ಮಗನಿಗೆ ಜನ್ಮ ನೀಡುತ್ತಾಳೆ. ಮೊದಲೇ ತಂದೆಯನ್ನು ಕಳೆದುಕೊಂಡ ಆತ ಚಿಕ್ಕ ಹುಡುಗನಾಗಿದ್ದಾಗಲೇ ತಾಯಿ ಕೂಡ ತೀರಿಹೋಗುತ್ತಾಳೆ. ಆದರೆ ಆಕೆ ಆತನಿಂದ ತೆಗೆದುಕೊಳ್ಳುವ ಒಂದು ಮಾತು ಆತನ ಮುಂದಿನ ಬದುಕನ್ನೇ ರೂಪಿಸುತ್ತದೆ. ಬಡತನದಲ್ಲಿ ಹುಟ್ಟಬಾರದು ಎಂದು ನನಗೆ ತಿಳಿದಿತ್ತು. ಆದರೆ ಸಾಯುವಾಗ ಶ್ರೀಮಂತನಾಗಿ ಸಾಯಬೇಕೆಂದು ಅರಿತುಕೊಂಡೆ ಎನ್ನುತ್ತಾಳೆ. ಹಾಗಾಗಿ ಶ್ರೀಮಂತನಾಗಿ ಸಾಯುವ ಗುರಿಯೊಂದಿಗೆ ಹುಡುಗ ಮುಂಬೈ ಸೇರುತ್ತಾನೆ. ಆದರೆ ದುಡ್ಡು ಮಾಡುವ ಮಾರ್ಗದ ಬಗ್ಗೆ ತಿಳಿಸಲು ಆತನಿಗೆ ಒಳ್ಳೆಯ ಮಾದರಿಗಳಿರುವುದಿಲ್ಲ. ಹಾಗಾಗಿ ಡಾನ್ ಆಗುವುದೇ ಆತನ ಗುರಿಯಾಗುತ್ತದೆ. ಆದರೆ ಮತ್ತೆ ಕೆಜಿಎಫ್ ಜನ್ಮಸ್ಥಳಕ್ಕೆ ಮರಳಬೇಕಾದ ಸಂದರ್ಭ ಬರುತ್ತದೆ. ಮರಳಿದಾಗ ಏನಾಗುತ್ತದೆ? ಕೆಜಿಎಫ್ ಒಳಗೆ ಹೇಗೆ ಸೇರಿಕೊಳ್ಳುತ್ತಾನೆ? ಅಲ್ಲಿ ಆತನಿಗೆ ಎದುರಾಗುವ ಪರಿಸ್ಥಿತಿಗಳೇನು ಎನ್ನುವುದೇ ಚಿತ್ರದ ಪ್ರಮುಖ ಅಂಶ. ಇದೆಲ್ಲವನ್ನು ಪರದೆಯ ಮೇಲೆ ನೋಡುವುದೇ ಒಂದು ಹೊಸ ಅನುಭವ.
ಇಡೀ ಚಿತ್ರವನ್ನು ವಾಹಿನಿಯೊಂದರಲ್ಲಿ ಬರುವ ಪತ್ರಕರ್ತನ ಮಾತುಕತೆಯಲ್ಲಿ ಬರುವ ದೃಶ್ಯಗಳಾಗಿ ತೋರಿಸಲಾಗಿದೆ. ಅವರ ಕಲ್ಪನೆಯಲ್ಲಿರುವ ನಾಯಕನ ಬಗ್ಗೆ ವಿವರಿಸುವಾಗ ರವಿ ಬಸ್ರೂರು ಹಿನ್ನೆಲೆ ಸಂಗೀತದಲ್ಲಿ ಎಂಟ್ರಿ ನೀಡುವ ಯಶ್ ರಾಕಿಯಾಗಿ ನೇರ ಪ್ರೇಕ್ಷಕರ ಮನದೊಳಗೆ ಸೇರಿಕೊಳ್ಳುತ್ತಾರೆ. ರಾಕಿಯ ಪಾತ್ರವನ್ನು ಪ್ರೇಕ್ಷಕರಿಗೆ ಹತ್ತಿರವಾಗಿಸುವಲ್ಲಿ ಸಂಭಾಷಣೆಯ ಪಾತ್ರ ಪ್ರಮುಖವಾದದ್ದು. ಲುಕ್, ಸ್ಟೈಲು ಎಲ್ಲ ವಿಚಾರದಲ್ಲಿ ಕೂಡ ಯಶ್ ಗಮನ ಸೆಳೆಯುತ್ತಾರೆ. ರಾಕಿಯ ಕತೆಯನ್ನು ಹೇಳುವ ಪತ್ರಕರ್ತನಾಗಿ ಅನಂತನಾಗ್ ಮತ್ತು ಸಂದರ್ಶಕಿಯಾಗಿ ಮಾಳವಿಕಾ ನಟಿಸಿದ್ದಾರೆ. ಚಾನೆಲ್ ಮಾಲಕನಾಗಿ ಟಿ.ಎಸ್. ನಾಗಾಭರಣ, ಹಿರಿಯ ಮೈನಿಂಗ್ ಕಾರ್ಮಿಕನಾಗಿ ಬಿ.ಸುರೇಶ್ ನಟಿಸಿದ್ದಾರೆ. ನಾಯಕಿಯಾಗಿ ಕರಾವಳಿಯ ಬೆಡಗಿ ಶ್ರೀನಿಧಿ ಶೆಟ್ಟಿ ಸಿಕ್ಕ ಅವಕಾಶದಲ್ಲಿ ತಾನೋರ್ವ ಉತ್ತಮ ನಟಿ ಎನ್ನುವುದನ್ನು ಸಾಬೀತುಪಡಿಸಿದ್ದಾರೆ.
ಸಾಮಾನ್ಯವಾಗಿ ರೌಡಿಯನ್ನು ನಾಯಕಿ ಇಷ್ಟಪಡುವ ಸನ್ನಿವೇಶ ತುಂಬ ನಾಟಕೀಯವಾಗಿ ಮೂಡಿಬರುವುದು ಸಹಜ. ಆದರೆ ಅದನ್ನು ಸುಳ್ಳಾಗಿಸುವಂತೆ ರಸ್ತೆಯಲ್ಲಿ ಮಗುವಿನ ತಾಯಿಯ ಕೈಗೆ ಬನ್ ಎತ್ತಿ ಕೊಡುವ ದೃಶ್ಯ ತುಂಬ ಮಾರ್ಮಿಕವಾಗಿ ಮೂಡಿ ಬಂದಿವೆ. ಆ ದೃಶ್ಯ ಮತ್ತು ಸಂಭಾಷಣೆ ನಾಯಕಿಯನ್ನು ಮಾತ್ರವಲ್ಲ, ಇಡೀ ಪ್ರೇಕ್ಷಕ ಸಮೂಹವನ್ನೇ ಆಕರ್ಷಿಸುವುದರಲ್ಲಿ ವಿಶೇಷವೇನೂ ಇಲ್ಲ. ಖಳನಟರಲ್ಲಿ ಹರೀಶ್ ರಾಯ್, ವಸಿಷ್ಠಸಿಂಹ ಗಮನ ಸೆಳೆಯುತ್ತಾರೆ. ಯುವನಟರಾದ ಯಶ್ ಶೆಟ್ಟಿ, ಸಂಪತ್ ಕುಮಾರ್ ಮೊದಲಾದವರ ಜೊತೆಗೆ ಉಷಾ ಭಂಡಾರಿ ಮೊದಲಾದವರು ತಾರಾಗಣದಲ್ಲಿದ್ದಾರೆ.
ಪ್ರಶಾಂತ್ ನೀಲ್ ಅವರ ಕನಸು ನನಸಾಗಿಸುವಲ್ಲಿ ಭುವನ್ ಗೌಡರ ಛಾಯಾಗ್ರಹಣ ಮತ್ತು ಕಲಾ ನಿರ್ದೇಶಕ ಶಿವಕುಮಾರ್ ಅವರ ಜೊತೆಗೂಡುವಿಕೆ ಪ್ರಮುಖ ಅಂಶ. ತಮನ್ನಾ ಕುಣಿದಿರುವ ‘ನಾನು ಬಳ್ಳಿಯ ಮಿಂಚು’ ಸಂಚಲನ ಸೃಷ್ಟಿಸುವುದಿಲ್ಲ. ಸಿನಿಮೀಯ ಕ್ಲೈಮ್ಯಾಕ್ಸ್ನೊಂದಿಗೆ ಚಿತ್ರ ಅಂತ್ಯವಾದರೂ ಕೂಡ ಥಿಯೇಟರಲ್ಲಿ ಕುಳಿತ ಪ್ರೇಕ್ಷಕ ಚಾಪ್ಟರ್ 2 ನೋಡುವ ಕುತೂಹಲವನ್ನು ಮೂಡಿಸಿಕೊಂಡಿರುತ್ತಾನೆ. ಅಲ್ಲಿಗೆ ಕನ್ನಡ ಚಿತ್ರವೊಂದು ಇತಿಹಾಸ ಸೃಷ್ಟಿಸುವಲ್ಲಿ ಪೂರಕ ಹೆಜ್ಜೆಗಳನ್ನಿಟ್ಟಿದೆ ಎಂದು ಧೈರ್ಯವಾಗಿ ಹೇಳಬಹುದು.
ತಾರಾಗಣ: ಯಶ್, ಶ್ರೀನಿಧಿ ಶೆಟ್ಟಿ
ನಿರ್ದೇಶನ: ಪ್ರಶಾಂತ್ ನೀಲ್
ನಿರ್ಮಾಣ: ವಿಜಯ್ ಕಿರಗಂದೂರು