ʼನೀನು ಎಡಚರನಾ? ಗುಲಾಮನಾ?ʼ: ರಕ್ಷಿತ್ ಶೆಟ್ಟಿ ಮೇಲೆ ಮುಗಿಬಿದ್ದ ಸಂಘಪರಿವಾರ ಬೆಂಬಲಿಗರು.!
ಬೆಂಗಳೂರು: ಕನ್ನಡದ ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ಅವರ ಮೇಲೆ ಬಲಪಂಥೀಯ ಹಿಂದುತ್ವವಾದಿಗಳು ಮುಗಿಬಿದ್ದಿದ್ದಾರೆ. ಬಹುಭಾಷಾ ನಟಿ ಸಾಯಿ ಪಲ್ಲವಿ ಅವರ ನೂತನ ಚಿತ್ರ ʼಗಾರ್ಗಿʼ ಯನ್ನು ಕನ್ನಡದಲ್ಲಿ ರಕ್ಷಿತ್ ಶೆಟ್ಟಿ ಅವರ ಸಂಸ್ಥೆ ವಿತರಿಸುತ್ತಿದ್ದು, ಚಿತ್ರವನ್ನು ವೀಕ್ಷಿಸುವಂತೆ ರಕ್ಷಿತ್ ಶೆಟ್ಟಿ ಪ್ರಚಾರ ನೀಡಿರುವುದು ಹಿಂದುತ್ವವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ಇತ್ತೀಚೆಗೆ ಬಿಡುಗಡೆಯಾಗಿದ್ದ ವಿರಾಟ ಪರ್ವಂ ಚಿತ್ರದ ಸಂದರ್ಶನದ ಸಂದರ್ಭದಲ್ಲಿ, ಕಾಶ್ಮೀರ ಹತ್ಯೆ, ಗೋವಿನ ಹೆಸರಿನಲ್ಲಿ ನಡೆಯುವ ಹತ್ಯೆಯನ್ನು ಉಲ್ಲೇಖಿಸಿದ್ದ ಸಾಯಿ ಪಲ್ಲವಿ ʼಕಾಶ್ಮೀರ ಪಂಡಿತರ ಹತ್ಯೆ ಹಾಗೂ ದನದ ಹೆಸರಿನಲ್ಲಿ ʼಜೈ ಶ್ರೀ ರಾಮ್ʼ ಕೂಗಿ ನಡೆಸುವ ಹತ್ಯೆಗಳಿಗೆ ಯಾವುದೇ ವ್ಯತ್ಯಾಸವಿಲ್ಲʼ ಎಂದು ಹೇಳಿರುವುದು ಬಲಪಂಥೀಯ ಹಿಂದುತ್ವವಾದಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಕೆಲವು ಮಾಧ್ಯಮಗಳು ಸಾಯಿ ಪಲ್ಲವಿಯ ಹೇಳಿಕೆಯನ್ನು ತಿರುಚಿ ಗೋಕಳ್ಳರಿಗೆ ನಟಿ ಬೆಂಬಲ ನೀಡಿದ್ದಾರೆ ಎಂದು ವರದಿಯನ್ನು ಮಾಡಿದ್ದವು.
ಅದರ ಬಳಿಕ ಸಾಯಿ ಪಲ್ಲವಿ ಸ್ಪಷ್ಟನೆ ನೀಡಿದ್ದು, ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡು ಸಮಜಾಯಿಷಿ ನೀಡಿದ್ದರು. ಧರ್ಮದ ಹೆಸರಿನಲ್ಲಿ ಯಾರನ್ನೂ ಕೊಲ್ಲಬೇಡಿ ಅಂದದ್ದು ತಪ್ಪು ಹೇಗಾಗುತ್ತದೆ ಎಂದು ಮತ್ತೊಮ್ಮೆ ಪ್ರಶ್ನಿಸಿದ್ದರು. ಅದಾಗ್ಯೂ, ಬಲಪಂಥೀಯರು ನಟಿಯ ವೈಯಕ್ತಿಕ ತೇಜೋವಧೆ ನಡೆಸಿದ್ದರು. ಮುಖದ ಮೇಲಿನ ಮೊಡವೆಯನ್ನು ಮುಂದಿಟ್ಟುಕೊಂಡು ಸಾಯಿ ಪಲ್ಲವಿ ವಿರುದ್ಧ ನಿಂದನಾತ್ಮಕ ಪ್ರತಿಕ್ರಿಯೆಗಳನ್ನು ನೀಡಿದ್ದರು. ಅಲ್ಲದೆ, ಸಾಯಿ ಪಲ್ಲವಿ ಸಿನೆಮಾವನ್ನು ಬಹಿಷ್ಕರಿಸಲು ಕರೆ ನೀಡಿದ್ದರು. ಅದೇ ವೇಳೆ ಸಾಯಿ ಪಲ್ಲವಿ ನಿಲುವಿಗೂ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು ಮಾತ್ರವಲ್ಲ, ಬಲಪಂಥೀಯರ ಬಹಿಷ್ಕಾರದ ಕರೆಗೆ ವ್ಯತಿರಿಕ್ತವಾಗಿ ʼವಿರಾಟ ಪರ್ವಂʼ ಚಿತ್ರ ಗೆದ್ದಿತ್ತು.
ಇದೀಗ, ರಕ್ಷಿತ್ ಶೆಟ್ಟಿ ಅವರು ಸಾಯಿ ಪಲ್ಲವಿ ಅಭಿನಯದ ಚಿತ್ರಕ್ಕೆ ಪ್ರಚಾರ ನೀಡಿದ್ದು ಬಲಪಂಥೀಯರ ಕೋಪ ಹೆಚ್ಚಾಗಲು ಕಾರಣವಾಗಿದೆ. ರಮ್ಯಾ, ಸಾಯಿ ಪಲ್ಲವಿ ಮೊದಲಾದ ಪರ ಮಾತನಾಡುವ ರಕ್ಷಿತ್ ಶೆಟ್ಟಿ ಎಡಚರ (ಎಡಪಂಥೀಯ)ನಾ? ಅಥವಾ ಗುಲಾಮನಾ? ಎಂದೆಲ್ಲಾ ಬಲಪಂಥೀಯರು ಅವರ ಫೇಸ್ಬುಕ್ ಪೋಸ್ಟ್ನಲ್ಲಿ ಕಾಮೆಂಟ್ ಹಾಕುತ್ತಿದ್ದಾರೆ. ಇನ್ನು ಕೆಲವರು ನಿಂದನಾತ್ಮಕ ಪದ ಬಳಕೆ ಮಾಡಿದ್ದು, ರಕ್ಷಿತ್ ಶೆಟ್ಟಿ ಸಿನೆಮಾಗಳನ್ನೂ ಬಹಿಷ್ಕರಿಸುವುದಾಗಿ ಎಚ್ಚರಿಸಿದ್ದಾರೆ.