ಲಸಿಕೆ ಹಾಕದ ವಿದ್ಯಾರ್ಥಿಗೆ ಕಾಲೇಜು ಪ್ರವೇಶ ನಿರಾಕರಣೆ ಆರೋಪ; ‘ವೇಕ್ ಅಪ್ ಮಂಗಳೂರು’ ಗುಂಪಿನಿಂದ ಪ್ರಾಂಶುಪಾಲರ ಭೇಟಿ
ಮಂಗಳೂರು, ಜ.17: ಕೋವಿಡ್ ಲಸಿಕೆ ಹಾಕದ ಕಾರಣಕ್ಕೆ 17ರ ಹರೆಯದ ವಿದ್ಯಾರ್ಥಿಗೆ ಕಾಲೇಜು ತರಗತಿಗೆ ಪ್ರವೇಶ ನಿರಾಕರಿಸಿರುವುದನ್ನು ಆಕ್ಷೇಪಿಸಿ ‘ವೇಕ್ಅಪ್ ಮಂಗಳೂರು’ ಗುಂಪಿನ ನಾಗರಿಕರು ಪ್ರಾಂಶುಪಾಲರನ್ನು ಭೇಟಿಯಾದ ಘಟನೆ ಇಂದು ನಡೆದಿದೆ.
ನಗರದ ಗಣಪತಿ ಪಿಯು ಕಾಲೇಜಿನಲ್ಲಿ ಕಲಿಯುತ್ತಿರುವ ವಿದ್ಯಾರ್ಥಿ ಕೋವಿಡ್ ನಿಯಂತ್ರಣ ಲಸಿಕೆ ಹಾಕಿಸಿಕೊಂಡಿಲ್ಲವೆಂಬ ಕಾರಣಕ್ಕೆ ಆತನಿಗೆ ಕಾಲೇಜಿಗೆ ಪ್ರವೇಶ ನಿರಾಕರಿಸಲಾಗಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕಾಲೇಜಿನ ಪ್ರಾಂಶುಪಾಲರನ್ನು ಇಂದು ಮಧ್ಯಾಹ್ನ ಭೇಟಿಯಾದ ವೇಕ್ಅಪ್ ಮಂಗಳೂರು ತಂಡದ ಸದಸ್ಯರು, 15-18 ವರ್ಷ ವಯಸ್ಸಿನವರಿಗೆ ಕೋವಿಡ್ ಲಸಿಕೆಯನ್ನು ತೆಗೆಕೊಲ್ಳುವಂತೆ ಒತ್ತಾಯಿಸಲು ಸಾಧ್ಯವಿಲ್ಲ. ಬಲವಂತ ಪಡಿಸುವಂತಿಲ್ಲ. ತಾರತಮ್ಯ ಮಾಡುವಂತಿಲ್ಲ. ಈ ರೀತಿ ಒತ್ತಾಯಪೂರ್ವಕವಾಗಿ ಲಸಿಕೆ ಹಾಕಿಸುವುದು ಸುಪ್ರೀಂ ಕೋರ್ಟ್ ಆದೇಶ, ಆರೋಗ್ಯ ಸಚಿವಾಲಯ ಮತ್ತು ಐಸಿಎಂಆರ್ ಮಾರ್ಗಸೂಚಿಗಳಿಗೆ ವಿರುದ್ಧ ಎಂಬುದನ್ನು ಪ್ರಾಂಶುಪಾಲರು ಹಾಗೂ ಆ ಸಂದರ್ಭ ಕಾಲೇಜಿನಲ್ಲಿದ್ದ ಸಿಬ್ಬಂದಿಗೆ ತಿಳಿಸಿದ್ದು, ಈ ಬಗ್ಗೆ ಕಾಲೇಜಿನ ಆಡಳಿತ ಮಂಡಳಿಯ ಮೇಲಧಿಕಾರಿಗಳ ಜತೆ ಮಾತನಾಡುವುದಾಗಿ ಪ್ರಾಂಶುಪಾಲರು ತಿಳಿಸಿರುವುದಾಗಿ ವೇಕ್ಅಪ್ ಮಂಗಳೂರು ತಂಡದ ಸದಸ್ಯರು ತಿಳಿಸಿದ್ದಾರೆ.