ನೆಲ್ಯಾಡಿ, ಸುಬ್ರಹ್ಮಣ್ಯ ಆರೋಗ್ಯ ಕೇಂದ್ರಗಳಿಗೆ ದ.ಕ. ಜಿಲ್ಲಾಧಿಕಾರಿ, ಸಿಇಒ ಭೇಟಿ
ಮಂಗಳೂರು, ಜ.21: ಜಿಲ್ಲೆಯ ಕೋವಿಡ್ ಲಸಿಕೆಯ ಪ್ರಗತಿ ಪರಿಶೀಲಿಸಲು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಹಾಗೂ ದ.ಕ. ಜಿಪಂ ಸಿಇಒ ಡಾ.ಕುಮಾರ್ ಶುಕ್ರವಾರ ನೆಲ್ಯಾಡಿ ಹಾಗ ಸುಬ್ರಹ್ಮಣ್ಯದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ನೆಲ್ಯಾಡಿಯಲ್ಲಿ ಮೊದಲ ಡೋಸ್ ಲಸಿಕೆ ಪಡೆಯದ ಸುಮಾರು 500 ಜನರಿದ್ದು, ಅವರಿಗೆ ಕಡ್ಡಾಯವಾಗಿ ಲಸಿಕೆ ನೀಡಲು ಸೂಕ್ತ ಕ್ರಮಕೈಗೊಳ್ಳಬೇಕು. ಎರಡನೇ ಡೋಸ್ ಲಸಿಕೆ ಪಡೆಯದವರನ್ನು ಪತ್ತೆ ಮಾಡಬೇಕು ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗೆ ನಿರ್ದೇಶನ ನೀಡಿದರು.
ನೆಲ್ಯಾಡಿಯಲ್ಲಿ 18 ಸಕ್ರಿಯ ಪ್ರಕರಣಗಳಿವೆ, ಅವರ ಪ್ರಾಥಮಿಕ ಸಂಪರ್ಕಿತರ ಪತ್ತೆ ಕಾರ್ಯ ಮಾಡಬೇಕು ಹಾಗೂ ಅವರು ಹೋಂ ಐಸೋಲೇಷನ್ನಲ್ಲಿರುವ ಬಗ್ಗೆ ಪರಿಶೀಲಿಸಬೇಕು ಎಂದು ಸಿಬ್ಬಂದಿಗೆ ಸೂಚಿಸಿದರು.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆಗಮಿಸುವವರ ಆರ್ಟಿ-ಪಿಸಿಆರ್ ವರದಿ ನೆಗೆಟಿವ್ ಆಗಿರಬೇಕು ಹಾಗೂ ಕೋವಿಡ್ನ ಎರಡೂ ಡೋಸ್ ಲಸಿಕೆ ಪಡೆದುಕೊಂಡಲ್ಲಿ ಮಾತ್ರ ದರ್ಶನಕ್ಕೆ ಅನುಮತಿಸುವಂತೆ ತಿಳಿಸಿದ ಡಿಸಿ, ಸಾಧ್ಯವಾದಷ್ಟು ಮಟ್ಟಿಗೆ ಜನಸಂದಣಿ ಆಗದಂತೆ ನೋಡಿಕೊಳ್ಳಬೇಕೆಂದು ತಿಳಿಸಿದರು.