ಅಪರಿಚಿತರಾಗಿ ಬಂದವರು ಪರಿಚಿತರಾಗುವುದೇ ರಕ್ತದಾನದಿಂದ: ಸುಂದರ್ ರಾಮ್ ಮುದ್ರಾಡಿ
ಮಂಗಳೂರು: ಅಪರಿಚಿತರಾಗಿ ಬಂದವರು ಪರಿಚಿತರಾಗುವುದೇ ನೀಡಿದ ರಕ್ತದಾನದಿಂದಾಗಿದೆ. ಆ ಕಾರಣಕ್ಕಾಗಿಯೇ ರಕ್ತದಾನ ಶ್ರೇಷ್ಠದಾನ ಎಂದು ಕಾಂತೇಶ್ವರ ಹೈಸ್ಕೂಲ್ ನಿವೃತ್ತ ಮುಖ್ಯೋಪಾಧ್ಯಾಯರಾದ ಎಂ. ಸುಂದರ್ ರಾಮ್ ಹೇಳಿದರು.
ಅವರು ಖಲಂದರ್ ಚಾರಿಟೇಬಲ್ ಟ್ರಸ್ಟ್ ಬೆಳುವಾಯಿ ಹಾಗೂ ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ಇದರ ಜಂಟಿ ಆಶ್ರಯದಲ್ಲಿ ಎ. ಜೆ. ಆಸ್ಪತ್ರೆ ರಕ್ತ ನಿಧಿ ಮಂಗಳೂರು ಮತ್ತು ರೋಟರಿ ರಕ್ತನಿಧಿ ಆಳ್ವಾಸ್ ಮೂಡಬಿದ್ರೆ, ಆಳ್ವಾಸ್ ಆರೋಗ್ಯ ಕೇಂದ್ರ ಮೂಡಬಿದ್ರೆ ಇವರ ಸಹಭಾಗಿತ್ವದಲ್ಲಿ ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ಸಂಸ್ಥೆಯ 127ನೇ ಬೃಹತ್ ಸಾರ್ವಜನಿಕ ರಕ್ತದಾನ ಶಿಬಿರವನ್ನು ಬೆಳುವಾಯಿ ಬ್ಲೋಸಂ ಆಂಗ್ಲ ಮಾದ್ಯಮ ಶಾಲಾ ಸಭಾಂಗಣದಲ್ಲಿ ಉದ್ಘಾಟಿಸಿ ಮಾತಾಡುತ್ತಿದ್ದರು.
ಬೆಳುವಾಯಿ ಅಬೂಬಕ್ಕರ್ ಸಿದ್ದೀಕ್ ಜುಮ್ಮಾ ಮಸೀದಿಯ ಧರ್ಮ ಗುರುಗಳಾದ ಅಬ್ದುಲ್ ಬಾಶಿತ್ ಪ್ರಥಮವಾಗಿ ರಕ್ತದಾನ ಮಾಡುವ ಮೂಲಕ ಚಾಲನೆಗೈದರು.
ಖಲಂದರ್ ಚಾರಿಟೇಬಲ್ ಟ್ರಸ್ಟ್ ಬೆಳುವಾಯಿ ಇದರ ಗೌರವ ಅಧ್ಯಕ್ಷರಾದ ಅಬ್ದುಲ್ ರಹಿಮಾನ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಬೆಳುವಾಯಿ ಇದರ ಉಪಾಧ್ಯಕ್ಷರಾದ ರವೀಂದ್ರ ಪೂಜಾರಿ, ಬ್ಲೋಸಂ ಆಂಗ್ಲ ಮಾದ್ಯಮ ಶಾಲಾ ವ್ಯವಸ್ಥಾಪಕರಾದ ಸೈಮನ್ ಮಸ್ಕರೇನಸ್, ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ಇದರ ಅಧ್ಯಕ್ಷರಾದ ನಝೀರ್ ಹುಸೈನ್ ಮಂಚಿಲ, ಎ.ಜೆ ಆಸ್ಪತ್ರೆ ಮಂಗಳೂರು ರಕ್ತನಿಧಿ ಕ್ಯಾಂಪ್ ಮುಖ್ಯಸ್ಥ ಗೋಪಾಲಕೃಷ್ಣ, ಆಳ್ವಾಸ್ ಹೆಲ್ತ್ ಸೆಂಟರ್ ಮೂಡಬಿದಿರೆ ಆಡಳಿತಾಧಿಕಾರಿ ಭಾಸ್ಕರ್, ಜಾಮಿಯ ಮಸ್ಜಿದ್ ಬೆಳುವಾಯಿ ಇದರ ಅಧ್ಯಕ್ಷರಾದ ಅನ್ವರ್ ಅಹ್ಮದ್, ಜಾಮಿಯ ಮಸ್ಜಿದ್ ಬೆಳುವಾಯಿ ಮಾಜಿ ಅಧ್ಯಕ್ಷರಾದ ಅಬ್ದುಲ್ ಸಲೀಂ, ಬೆಳುವಾಯಿ ಕಮ್ಯೂನಿಟಿ ಸೆಂಟರ್ ಇದರ ಅಧ್ಯಕ್ಷರಾದ ಝಾಹಿದ್ ಗುಲಾಮ್ ಹುಸೈನ್, ಬೆಳುವಾಯಿ ಬಂಗ್ಲೆ ಶಾಲಾ ಹಳೇ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಕೃಷ್ಣನಾಯ್ಕ್, ಬ್ಲಡ್ ಹೆಲ್ಪ್ ಕೇರ್ ಸಂಸ್ಥೆಯ ಸಂಚಾಲಕರಾದ ಶಂಸುದ್ದೀನ್ ಬಳ್ಕುಂಜೆ, ಅರ್ವತ್ತೊಂದು ಬಾರಿ ರಕ್ತದಾನ ಮಾಡಿದ ಪ್ರವೀಣ್ ಜೈನ್ ಬೆಳುವಾಯಿ, BCC ಗ್ಲೋಬಲ್ ಕಾರ್ಯದರ್ಶಿ ಅನ್ವರ್ ಹುಸೇನ್, ಬ್ಲಡ್ ಹೆಲ್ಪ್ ಕೇರ್ ಸಂಸ್ಥೆಯ ಮುಖ್ಯಸ್ಥರಾದ ಫರ್ವೀಝ್ ಉಪ್ಪಳ, ಖಾದರ್ ಮುಂಚೂರು, ಷಹಜಾನ್ ಮುಕ್ಕ ಹಾಗೂ ಖಲಂದರ್ ಚಾರೀಟೇಬಲ್ ಟ್ರಸ್ಟ್ ಇದರ ಪದಾಧಿಕಾರಿಗಳಾದ ಸೌಕತ್ ಆಲಿ, ನಾಸೀರ್ ಹುಸೇನ್ ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಖಲಂದರ್ ಚಾರಿಟೇಬಲ್ ಟ್ರಸ್ಟ್ ಇದರ ಅಧ್ಯಕ್ಷರೂ ಬ್ಲಡ್ ಹೆಲ್ಪ್ ಕೇರ್ ಸಂಸ್ಥೆಯ ಸಲಹೆಗಾರರು ಆದ ಸುಲೈಮಾನ್ ಶೇಖ್ ಬೆಳುವಾಯಿ ಸ್ವಾಗತಿಸಿದರು. ಬ್ಲಡ್ ಹೆಲ್ಪ್ ಕೇರ್ ಸಂಸ್ಥೆಯ ಕೋಶಾಧಿಕಾರಿ ಸತ್ತಾರ್ ಪುತ್ತೂರು ವಂದಿಸಿದರು. ಸಂಸ್ಥೆಯ ಮಾಧ್ಯಮ ಮುಖ್ಯಸ್ಥ ಅಬ್ದುಲ್ ಹಮೀದ್ ಗೋಳ್ತಮಜಲ್ ಕಾರ್ಯಕ್ರಮ ನಿರೂಪಿಸಿದರು.